ಢಾಕಾ: ಢಾಕಾ ಕೆಫೆ ದಾಳಿಯ ರೂವಾರಿ ಬಾಂಗ್ಲಾದೇಶ ಸಂಜಾತ ಕೆನಡಾ ಪ್ರಜೆ ತಮೀಮ್ ಅಹ್ಮದ್ ಚೌಧರಿ ಮತ್ತು ಇಬ್ಬರು ಉಗ್ರರನ್ನು ಬಾಂಗ್ಲಾದೇಶದ ಪೊಲೀಸರು ಹತ್ಯೆಗೈದಿದ್ದಾರೆ.
ಬಾಂಗ್ಲಾದೇಶದ ಹೊರವಲಯದಲ್ಲಿ ಈ ಉಗ್ರರು ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದನ್ವಯ ಪೊಲೀಸರು ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದರು. ಇಲ್ಲಿನ ನಾರಾಯಣ್ಗಂಜ್ ಪೈಕ್ಪರ್ಹ ಎಂಬಲ್ಲಿ ಈ ದಾಳಿ ನಡೆದಿದೆ.
ಈ ದಾಳಿಯಲ್ಲಿ ತಮೀಮ್ ಚೌಧರಿ ಮೃತಪಟ್ಟಿರುವುದಾಗಿ ಪೊಲೀಸ್ ವಕ್ತಾರ ಜಲಾಲುದ್ದೀನ್ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ತಿಂಗಳು ಢಾಕಾದಲ್ಲಿ 9 ಶಂಕಿತ ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದರು.
2016 ಜುಲೈ ಒಂದರಂದು ನಡೆದ ಕೆಫೆ ಮೇಲಿನ ದಾಳಿಯಲ್ಲಿ 22 ಜನರು ಮೃತಪಟ್ಟಿದ್ದು, ಜಮಾತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ ಎಂಬ ನಿಷೇಧಿತ ಸಂಘಟನೆ ಈ ದಾಳಿ ನಡೆಸಿತ್ತು. ಕೆಫೆ ಮೇಲಿನ ದಾಳಿಯಲ್ಲಿ ಭಾರತ ಮೂಲದ ಬಾಲಕಿಯೊಬ್ಬಳು ಸೇರಿದಂತೆ ಬಹುತೇಕ ಮಂದಿ ವಿದೇಶಿಯರು ಸಾವನ್ನಪ್ಪಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.