ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ವಿರುದ್ಧ ಭಯೋತ್ಪಾದನೆ ಸಂಬಂಧಿತದ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ಭಾನುವಾರ ಹಿಂಪಡೆದಿದೆ.
ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಆತನ ನಾಲ್ವರು ಸಹಚರರ ವಿರುದ್ಧ ಸರ್ಕಾರವು ಉಗ್ರ ಚಟುವಟಿಕೆ ಸಂಬಂಧಿತ ಆರೋಪ ಹೊರಿಸಿಲ್ಲ ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ನ ಪರಿಶೀಲನಾ ಮಂಡಳಿಗೆ ಶನಿವಾರ ತಿಳಿಸಿದ್ದಾರೆ.
ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್ನನ್ನು ಬಂಧಿಸಲಾಗಿತ್ತು. ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.
ತನ್ನ ಬಂಧನವನ್ನು ಪ್ರಶ್ನಿಸಿ ಲಾಹೋರ್ ಹೈಕೋರ್ಟ್ಗೆ ಆತ ಅರ್ಜಿ ಸಲ್ಲಿಸಿದ್ದ. ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಬಂಧನದಲ್ಲಿ ಇಡಲಾಗಿದೆ ಎಂಬುದು ಆತನ ವಾದ. ಆದ್ದರಿಂದ ಕಳೆದ ಬಾರಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆತನ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು.
ಇದೀಗ ಭಯೋತ್ಪಾದನೆಯ ಆರೋಪಗಳಿಲ್ಲದ ತನ್ನ ಕಕ್ಷೀದಾರರನ್ನು ಬಿಡುಗಡೆಗೊಳಿಸುವಂತೆ ಕೋರಿ ಹಫೀಜ್ ಪರ ವಕೀಲ ಎ.ಕೆ.ದೋಗರ್ ಕೋರ್ಟ್ಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.