ದೇಶದಲ್ಲಿ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚುತ್ತಿದೆ. ಆಕರ್ಷಕ ವಿನ್ಯಾಸದ, ಹೆಚ್ಚು ಸಾಮರ್ಥ್ಯದ ಬಗೆಬಗೆಯ ವಾಹನಗಳು ಪೈಪೋಟಿಗೆ ಬಿದ್ದಂತೆ ರಸ್ತೆಗೆ ಇಳಿಯುತ್ತಿವೆ. ಆದರೆ ವಾಹನ ಚಾಲನೆಯಲ್ಲಿ, ಸಂಚಾರ ನಿಯಮಗಳ ಪಾಲನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳಲು ನಮಗೆ ಇನ್ನೂ ಸಾಧ್ಯವಾಗಿಲ್ಲ.
ಇದರ ಪರಿಣಾಮವಾಗಿ ರಸ್ತೆ ಅಪಘಾತಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಸಾವು–ನೋವಿನ ಸಂಖ್ಯೆಯಲ್ಲೂ ತೀವ್ರ ಏರಿಕೆ ಆಗುತ್ತಿದೆ. ದೇಶದಲ್ಲಿ ಪ್ರತೀ ವರ್ಷ ಸುಮಾರು ಐದು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ 1.5 ಲಕ್ಷಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಗೆ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ತಿದ್ದುಪಡಿ, ಹೆಚ್ಚಿನ ಮಹತ್ವ ಪಡೆದಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಪ್ರಸ್ತಾವಗಳನ್ನು ‘ರಸ್ತೆ ಸುರಕ್ಷತೆ ಮತ್ತು ಸಂಚಾರ ಮಸೂದೆ–2014’ ಒಳಗೊಂಡಿದ್ದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈಗ ಜಾರಿಯಲ್ಲಿರುವ 1988ರ ಮೋಟಾರು ವಾಹನ ಕಾಯ್ದೆಯಲ್ಲಿ ತೀರಾ ಕಡಿಮೆ ದಂಡ, ಶಿಕ್ಷೆ ಇರುವುದರಿಂದ ಸಂಚಾರ ನಿಯಮ ಉಲ್ಲಂಘನೆಯನ್ನು ತಡೆಯಲು ಪರಿಣಾಮಕಾರಿಯಾಗಿಲ್ಲ ಎಂಬ ಅಭಿಪ್ರಾಯವಿದೆ.
ಹೊಸ ಮಸೂದೆಯಲ್ಲಿ, ನಿಯಮ ಉಲ್ಲಂಘನೆಗೆ ವಿಧಿಸುವ ದಂಡ ಮತ್ತು ಶಿಕ್ಷೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ವಾಹನ ಓಡಿಸಿ ಮೊದಲ ಸಲ ಸಿಕ್ಕಿಬಿದ್ದರೂ ₨ 25 ಸಾವಿರ ದಂಡ ಹಾಗೂ ಮೂರು ತಿಂಗಳ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕುಡಿದು ಓಡಿಸಿದ ಮೂರನೇ ಪ್ರಕರಣಕ್ಕೆ ವಾಹನ ಪರವಾನಗಿ ಕಾಯಂ ರದ್ದುಗೊಳ್ಳಲಿದೆ. ಬೇಜವಾಬ್ದಾರಿಯಿಂದ ವಾಹನ ಓಡಿಸಿ ಮಕ್ಕಳ ಸಾವಿಗೆ ಕಾರಣರಾದರೆ ಕನಿಷ್ಠ ಏಳು ವರ್ಷ ಸಜೆ ಹಾಗೂ ₨ 3 ಲಕ್ಷ ದಂಡ ತೆರಬೇಕಾಗುತ್ತದೆ. ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕರೆದೊಯ್ಯುವಾಗ ಚಾಲಕ ಮದ್ಯಪಾನ ಮಾಡಿದ್ದರೆ ಮೂರು ವರ್ಷ ಜೈಲು ಹಾಗೂ ₨ 50 ಸಾವಿರ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಆದರೆ, ದಂಡ ಏರಿಕೆ ಭ್ರಷ್ಟಾಚಾರದ ಹೆಚ್ಚಳಕ್ಕೆ ಎಡೆಮಾಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಬೇಕು.
ವಾಹನಗಳನ್ನು ಮಿತಿ ಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸುವುದು ಒಂದು ಬಗೆಯ ಷೋಕಿ ಆಗಿದೆ. ಇದನ್ನು ತಡೆಯಲು ದಂಡ ಪ್ರಯೋಗಕ್ಕೆ ಮುಂದಾಗಿರುವುದೇನೋ ಸರಿ. ಆದರೆ ದಂಡದ ಭಯದಿಂದಲೇ ಅಪಘಾತಗಳನ್ನು ಪೂರ್ತಿ ನಿಯಂತ್ರಿಸಲಾಗದು. ಬಹುಪಾಲು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರಾದರೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳೂ ಅನೇಕ ವೇಳೆ ವಾಹನವನ್ನು ಅಪಘಾತಕ್ಕೆ ದೂಡುವುದುಂಟು.
ಹೆದ್ದಾರಿಗಳಲ್ಲಿ ಸೂಕ್ತ ಸುರಕ್ಷಾ ಕ್ರಮಗಳನ್ನು ಅಳವಡಿಸದಿರುವುದು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು, ಗುಂಡಿಗಳು, ಅವೈಜ್ಞಾನಿಕ ರಸ್ತೆ ಉಬ್ಬುಗಳು ಇವೆಲ್ಲಾ ಅಪಘಾತಕ್ಕೆ ಕಾರಣವಾಗಬಲ್ಲವು. ನಗರಗಳಲ್ಲಿ ಪಾದಚಾರಿಗಳ ಪಾಡು ಹೇಳತೀರದು. ಅವರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.
ಚಾಲನೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಬಿಗಿಗೊಳಿಸಬೇಕು. ರಸ್ತೆ ವಿನ್ಯಾಸ ಮತ್ತು ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು. ಹೆಲ್ಮೆಟ್, ಸೀಟ್ ಬೆಲ್ಟ್ ಅಂತಹ ಸುರಕ್ಷಾ ಸಾಧನಗಳ ಬಳಕೆಯ ಮಹತ್ವವನ್ನು ಮನದಟ್ಟು ಮಾಡಿಸಬೇಕು. ರಸ್ತೆ
ಸುರಕ್ಷತೆ ಸರ್ಕಾರಕ್ಕೆ ಮಾತ್ರ ಬೇಕಿರುವುದಲ್ಲ. ಪ್ರತಿಯೊಬ್ಬರೂ ಪಾಲಿಸಬೇಕಾದ ಬೀಜಮಂತ್ರ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.