ರಾಜ್ಯ ಸರ್ಕಾರ ಐವರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಿದೆ. ಇವರಲ್ಲಿ ನಟಿ ಜಯಮಾಲಾರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಸಕ್ರಿಯ ರಾಜಕಾರಣಿಗಳು. ಹೀಗೆ ಸಕ್ರಿಯ ರಾಜಕಾರಣಿಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವುದು ಸಂವಿಧಾನದ ಆಶಯಗಳಿಗೆ ಅಪಚಾರ ಮಾಡಿದಂತೆ.
ನಿಯಮಗಳ ಪ್ರಕಾರ, ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ, ಸಹಕಾರ ಕ್ಷೇತ್ರಗಳಲ್ಲಿ ವಿಷಯ ತಜ್ಞತೆ ಹಾಗೂ ಅನುಭವ ಇರುವವರನ್ನು ಮೇಲ್ಮನೆಗೆ ರಾಜ್ಯಪಾಲರು ನೇಮಕ ಮಾಡಬೇಕು. ಚುನಾವಣಾ ಕಣಕ್ಕಿಳಿದು ಗೆಲ್ಲಲಾರದ ವಿವಿಧ ಕ್ಷೇತ್ರಗಳ ಸಾಧಕರಿಗೆ ಅವಕಾಶ ಕೊಡಬೇಕೆಂಬುದು ಇದರ ಉದ್ದೇಶ. ಆದರೆ ‘ಸಮಾಜ ಸೇವೆ’ ಹೆಸರಲ್ಲಿ ಮೇಲ್ಮನೆಗೆ ರಾಜಕಾರಣಿಗಳನ್ನು ನಾಮನಿರ್ದೇಶನ ಮಾಡುವಂತಹ ಕೆಟ್ಟ ಸಂಪ್ರದಾಯ ಬೆಳೆದುಬಂದಿದೆ. ಇದು ಸರಿಯಲ್ಲ.
ವಿಧಾನಸಭೆ, ಸ್ಥಳೀಯ ಸಂಸ್ಥೆ ಅಥವಾ ಪದವೀಧರ ಕ್ಷೇತ್ರಗಳ ಮೂಲಕ ವಿಧಾನ ಪರಿಷತ್ ಪ್ರವೇಶಕ್ಕೆ ರಾಜಕಾರಣಿಗಳಿಗೆ ಅವಕಾಶ ಇದ್ದೇ ಇದೆ. ಹೀಗಿದ್ದೂ ವಿಧಾನ ಪರಿಷತ್ನ ನಾಮನಿರ್ದೇಶನದ ಸ್ಥಾನಗಳನ್ನೂ ಕಬಳಿಸಲು ರಾಜಕಾರಣಿಗಳು ಮುಂದಾಗುತ್ತಿರುವುದು ಸರಿಯಲ್ಲ. ಈ ಕೆಟ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕಲೇಬೇಕು.
ಹಿಂದೆಲ್ಲಾ ಒಬ್ಬಿಬ್ಬರು ರಾಜಕಾರಣಿಗಳನ್ನು ಪರಿಷತ್ಗೆ ನಾಮನಿರ್ದೇಶನ ಮಾಡಲಾಗುತ್ತಿತ್ತು. ಉಳಿದಂತೆ ಆಯಾ ಕ್ಷೇತ್ರಗಳ ಗಣ್ಯರನ್ನೇ ನೇಮಕ ಮಾಡಲಾಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಸಾರಾಸಗಟಾಗಿ ಎಲ್ಲಾ ಸ್ಥಾನಗಳಿಗೂ ರಾಜಕಾರಣಿಗಳನ್ನೇ ನೇಮಕ ಮಾಡುವುದು ಚಟವೇ ಆಗಿದೆ. ಹಿಂದಿನ ಬಿಜೆಪಿ ಸರ್ಕಾರವೂ ಇದನ್ನೇ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಈಗಿನ ಸರ್ಕಾರ ಕೂಡ ಅದೇ ಹಾದಿ ಹಿಡಿದಿದೆ. ಇದರಿಂದ ಮೇಲ್ಮನೆಗೆ ಇರುವ ಚಿಂತಕರ ಚಾವಡಿ, ಹಿರಿಯರ ಮನೆ ಎಂಬಂಥ ಹೆಸರುಗಳು ಅರ್ಥಹೀನವಾಗುತ್ತವೆ.
ಯಾವುದೇ ಸರ್ಕಾರ, ರಾಜಕಾರಣಿಗಳನ್ನು ನೇಮಕ ಮಾಡಲು ಮುಂದಾದರೆ ಅದನ್ನು ತಡೆಯುವುದು ರಾಜ್ಯಪಾಲರ ಕರ್ತವ್ಯ. ಈ ಹಿಂದೆ ಬಿಜೆಪಿಯಿಂದ ವಿ.ಸೋಮಣ್ಣ ಅವರನ್ನು ನಾಮನಿರ್ದೇಶನ ಮಾಡಲು ಯತ್ನಿಸಿದಾಗ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು. ಆದರೆ ನಂತರದ ದಿನಗಳಲ್ಲಿ, ರಾಜಕಾರಣಿಗಳನ್ನೇ ಬಿಜೆಪಿ ನಾಮನಿರ್ದೇಶನ ಮಾಡಿದಾಗ ಅದನ್ನು ಒಪ್ಪಿಕೊಂಡಿದ್ದರು. ಈಗಲೂ ಹಾಗೆಯೇ ಮಾಡಿದ್ದಾರೆ. ಇಲ್ಲಿ ರಾಜ್ಯಪಾಲರ ನಡೆ ಶಂಕಾಸ್ಪದವಾಗಿದೆ. ಈ ದ್ವಿಮುಖ ನೀತಿ ಸರಿಯಲ್ಲ.
ರಾಜ್ಯಸಭೆ ನಾಮಕರಣಗಳಲ್ಲಿ ನಿಯಮಗಳ ಪಾಲನೆ ಸ್ವಲ್ಪಮಟ್ಟಿಗಾದರೂ ಆಗುತ್ತಿದೆ. ಹೀಗಿದ್ದೂ ಮಣಿಶಂಕರ್ ಅಯ್ಯರ್ ಅವರಂತಹ ರಾಜಕಾರಣಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಉದಾಹರಣೆ ಇದೆ. ಆದರೆ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ರಾಜಾರಾಮಣ್ಣ, ಆರ್.ಕೆ. ನಾರಾಯಣ್ ಮುಂತಾದ ವಿವಿಧ ಕ್ಷೇತ್ರಗಳ ಸಾಧಕರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.
ಮೇಲ್ಮನೆಗೆ ನಾಮನಿರ್ದೇಶನಗೊಳ್ಳುವವರಿಗೆ ಇರಬೇಕಾದ ಅರ್ಹತೆ, ಮಾನದಂಡಗಳ ಕುರಿತಂತೆ ಸ್ಪಷ್ಟನೆ ಇದ್ದರೆ ಅದು ದುರ್ಬಳಕೆ ಆಗುವುದು ತಪ್ಪುತ್ತದೆ. ಮೇಲ್ಮನೆಗೆ ರಾಜಕಾರಣಿಗಳನ್ನೇ ನಾಮನಿರ್ದೇಶನ ಮಾಡುವುದಾದರೆ, ನಾಮನಿರ್ದೇಶನಗಳ ಕುರಿತಂತಹ ನಿಯಮವಾದರೂ ಯಾಕಿರಬೇಕು? ರಾಜಕಾರಣಿಗಳನ್ನು ಚುನಾವಣೆ ಮೂಲಕ ಮೇಲ್ಮನೆಗೆ ಗೆಲ್ಲಿಸಿಕೊಳ್ಳಲಿ. ನಾಮನಿರ್ದೇಶನ ಪದ್ಧತಿಯನ್ನೇ ರದ್ದು ಮಾಡುವುದು ಒಳ್ಳೆಯದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.