ವಿದ್ಯಾವಿಕಾಸ ಎಂಬುದು ಕರ್ನಾಟಕ ಸರ್ಕಾರದ ಒಂದು ಯೋಜನೆಯ ಹೆಸರು. ಸರ್ಕಾರಿ ಶಾಲೆಗಳಲ್ಲಿ ಕೈಮಗ್ಗದ ಸಮವಸ್ತ್ರ ಹಂಚುವುದು ಹಾಗೂ ಆ ಮೂಲಕ ರಾಜ್ಯದ ಸಾವಿರಾರು ನೇಕಾರರಿಗೆ ಜೀವನೋಪಾಯ ಒದಗಿಸುವುದು, ಹೀಗೆ ವಿದ್ಯೆ ಹಾಗೂ ನೇಯ್ಗೆ ಎಂಬ ಎರಡು ಘನ ಉದ್ದೇಶಗಳನ್ನು ಬೆಸೆಯುವುದು ಯೋಜನೆಯ ಗುರಿ. ಯೋಜನೆಯ ಅನ್ವಯ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ನೇಕಾರರಿಂದ ಬಟ್ಟೆ ನೇಯಿಸಿ, ಶಿಕ್ಷಣ ಇಲಾಖೆಗೆ ಮಾರಬೇಕು. ಶಿಕ್ಷಣ ಇಲಾಖೆಯು ಸಮವಸ್ತ್ರ ಹೊಲಿಸಿ ಉಚಿತವಾಗಿ ಮಕ್ಕಳಿಗೆ ಹಂಚಬೇಕು. ಕೆಲವರ್ಷ ಹೀಗೇ ನಡೆಯುತ್ತಿತ್ತು.
ಈಗ ಸಿದ್ದರಾಮಯ್ಯನವರ ಸರ್ಕಾರವು ನೇಕಾರನ ಕೈಗಳಿಂದ ಬಟ್ಟೆ ಖರೀದಿಯನ್ನು ಕಿತ್ತುಕೊಂಡು ಕಾರ್ಖಾನೆ ಮಾಲೀಕರ ಕೈಗಳಿಗೆ ಒಪ್ಪಿಸಲು ಹೊರಟಿದೆ. ಯೋಜನೆಯ ಮೂಲ ಆಶಯವನ್ನು ಮಣ್ಣುಪಾಲು ಮಾಡಲು ಹೊರಟಿದೆ. ಹಿಂದೊಮ್ಮೆ ಯಡಿಯೂರಪ್ಪನವರ ಸರ್ಕಾರವು ಹೆಂಗಸರಿಗೆ ಹಂಚಲೆಂದು, ಸೀರೆಗಳನ್ನು ಹೊರರಾಜ್ಯಗಳ ಮಿಲ್ಲುಗಳಿಂದ ಖರೀದಿಸಿ ಟೀಕೆಗೆ ಗುರಿಯಾಗಿತ್ತು. ಯಡಿಯೂರಪ್ಪನವರು, ಕನಿಷ್ಠಪಕ್ಷ ಹಳೆಯ ಆಶಯವನ್ನು ತಿರುಚಲು ಹೋಗಿರಲಿಲ್ಲ. ಹೊಸ ಖರೀದಿ ಮಾಡಿದ್ದರು. ಸಿದ್ದರಾಮಯ್ಯನವರು ಆಶಯ ತಿರುಚುವಲ್ಲಿ ನಿರತರಾಗಿದ್ದಾರೆ.
ವಿದ್ಯಾವಿಕಾಸ ಒಂದು ಸಣ್ಣ ಯೋಜನೆ. ಸರ್ಕಾರದ ಖರ್ಚಿನ ದೃಷ್ಟಿಯಿಂದ ಅಥವಾ ಕಿಕ್ಬ್ಯಾಕ್ ದೃಷ್ಟಿಯಿಂದ, ಪುಡಿಗಾಸಿನ ಯೋಜನೆಯೆಂದರೂ ಸರಿಯೆ. ಆದರೆ, ಯೋಜನೆಯ ಸಾಮಾಜಿಕ ಹಾಗೂ ಸಾಂಕೇತಿಕ ಮಹತ್ವ ಗಮನಿಸಿದಾಗ, ಉಪ್ಪಿನ ಸತ್ಯಾಗ್ರಹಕ್ಕೆ ಎಡೆಗೊಟ್ಟ ಬ್ರಿಟಿಷರ ಉಪ್ಪಿನ ನೀತಿಗಿಂತ ಕಡಿಮೆ ಕ್ರೂರವಾದದ್ದೇನಲ್ಲ ಈ ಸರ್ಕಾರದ ನಡವಳಿಕೆ.
ವಿದ್ಯಾವಿಕಾಸ ಯೋಜನೆಯು ನಡೆದು ಬಂದ ದಾರಿಯನ್ನು ಗುರುತಿಸುವುದು ಒಳ್ಳೆಯದು. ಆಗ, ಸರ್ಕಾರಿ ಯೋಜನೆಗಳು ಹೇಗೆ ಭ್ರಷ್ಟವಾಗುತ್ತವೆ, ಏಕೆ ಭ್ರಷ್ಟವಾಗುತ್ತವೆ ಎಂಬುದು ತಿಳಿದೀತು. ಹಾಗೆ ನೋಡಿದರೆ, ಸರ್ಕಾರಿ ಯೋಜನೆಗಳನ್ನು ಮುಕ್ಕಾಗಿಸುತ್ತಿರುವವರೆಲ್ಲರೂ ಭ್ರಷ್ಟರೇನಲ್ಲ. ಆದರೆ ಸೋಮಾರಿಗಳು. ಹಾಗೂ ಸೋಮಾರಿತನದ ಕಾರಣದಿಂದಾಗಿ ಅವಸರ ಪ್ರಿಯರು.
ಕೈಮಗ್ಗವೆಂಬುದು ಶ್ರಮದ ಉತ್ಪಾದನೆ. ಹಾಗಾಗಿ ನಿಧಾನಗತಿಯ ಉತ್ಪಾದನೆ. ಅರ್ಥಾತ್
ಸಮಯಬೇಡುವ ಉದ್ದಿಮೆ. ಅಧಿಕಾರಿಗಳು ಆಜ್ಞೆ ನೀಡುವಲ್ಲಿ ತಡಮಾಡುತ್ತಾರೆ. ಮಾರ್ಚ್ ತಿಂಗಳ ತನಕ ಕಾಯುವುದು ಒಳ್ಳೆಯ ನೀತಿ ಎಂದು ತಿಳಿಯುತ್ತಾರೆ. ಆರ್ಡರ್ ತಡವಾದಾಗ ಸಿದ್ಧವಸ್ತು ತಯಾರಿಕೆ ತಡವಾಗುತ್ತದೆ. ಕಡೇ ಗಳಿಗೆಯ ಅವಸರ ಮಿಗಿಲಾಗುತ್ತದೆ. ಯೋಜನೆಯ ಮೂಲ ಆಶಯ ಹಿಮ್ಮೆಟ್ಟುತ್ತದೆ. ಕಾರ್ಖಾನೆ ಮಾಲೀಕರು ಸಂತೆಗೆಂದು ಎಂಟು ಮೊಳ ನೇಯಲು ಸಿದ್ಧವಿರುತ್ತಾರೆ. ಮಾತ್ರವಲ್ಲ, ಮಾಮೂಲಿನ ಗಂಟಿನೊಡನೆ ಬರುತ್ತಾರೆ.
ಇಂತಹ ಅವಕಾಶಗಳಿಗೇ ಕಾಯುತ್ತಿರುವ ಒಳಗಿನ ಭ್ರಷ್ಟರು ಅವಸರದ ಖರೀದಿಯಲ್ಲಿ ನಿಷ್ಣಾತರು. ಕೈಮಗ್ಗ ಅದಕ್ಷ ಕ್ಷೇತ್ರವೆಂದೂ, ಅಗತ್ಯವಿರುವಷ್ಟು ಬಟ್ಟೆ ನೇಯಲಾರರೆಂದೂ, ಗುಣಮಟ್ಟ ಕಾಪಾಡಿಕೊಳ್ಳಲಾರರೆಂದೂ, ಕೈಮಗ್ಗ ಬಟ್ಟೆಯ ಖರೀದಿಯಿಂದ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾಗುವುದೆಂದು, ಷರಾ ಬರೆದು ಕಡತ ಮುಚ್ಚುತ್ತಾರೆ.
ಎರಡೆರಡು ಇಲಾಖೆಗಳು ಜಂಟಿಯಾಗಿ ಜಾರಿಗೊಳಿಸಬೇಕಿರುವ ಯೋಜನೆ ವಿದ್ಯಾವಿಕಾಸ. ಹಾಗಾಗಿ, ಕೈಮಗ್ಗಕ್ಕೆ ಎರಡೆರಡು ವಿಘ್ನಗಳು. ಲಕ್ಷಾಂತರ ಮೀಟರು ಬಟ್ಟೆಯನ್ನು ಪ್ರತಿವರ್ಷ ಕೊಳ್ಳಬೇಕಿರುವ ಇಲಾಖೆಯು ಪ್ರತಿವರ್ಷ ತಡವಾಗಿ ಆಜ್ಞೆ ಹೊರಡಿಸುತ್ತದೆ, ಪ್ರತಿವರ್ಷ ತಡವಾಗಿ ಹಣ ಬಿಡುಗಡೆ ಮಾಡುತ್ತದೆ. ಹಣ ಬಿಡುಗಡೆಯಾಗದೆ ನೂಲು ಖರೀದಿಸಲಾಗದು, ನೂಲು ಖರೀದಿಸದೆ ಬಣ್ಣ ಹಾಕಲಾಗದು, ಬಣ್ಣ ಹಾಕಲಾಗದೆ ನೇಯ್ಗೆ ಶುರುವಾಗದು. ಇತ್ತ ಕರ್ನಾಟಕ ಕೈಮಗ್ಗ ನಿಗಮವೂ ಅಧಿಕಾರಿಗಳಿಂದಲೇ ನಡೆದಿದೆ ತಾನೆ? ಅಲ್ಲೂ ಆಡಳಿತಾತ್ಮಕ ತಡ ಹಾಗೂ ತಡೆಗಳು ಇದ್ದಾವೆ ತಾನೆ! ನೇಕಾರರು ಬೀದಿಗೆ ಬೀಳುತ್ತಿರುವ ಪರಿಯಿದು.
ಎಲ್ಲಕ್ಕಿಂತ ಮಿಗಿಲಾಗಿ ಕೈಮಗ್ಗ ನೇಕಾರ ಮಾಮೂಲಿ ಕೊಡಲಾರ. ಮಾಮೂಲಿ ಕೊಡಲೆಂದು ನೇಕಾರರಿಂದ ಹಣ ಸಂಗ್ರಹಣೆ ಮಾಡಿದರೆ, ಕಹಳೆಯ ಬಾಯಿಗೆ ಮುತ್ತಿಟ್ಟಂತೆ. ಮಿಲ್ ಮಾಲೀಕರಾದರೆ, ಅದರಲ್ಲೂ ಹೊರರಾಜ್ಯಗಳ ಮಿಲ್ ಮಾಲೀಕರಾದರೆ, ವಸೂಲಿ ಸುಲಭ. ದಲ್ಲಾಳಿಗಳಿರುತ್ತಾರೆ, ನಗುನಗುತ್ತ ವ್ಯವಹರಿಸುತ್ತಾರೆ, ಕಪ್ಪುವ್ಯವಹಾರವೂ ಬಿಳಿಯ ಹಾಳೆಯಷ್ಟು ಶುಭ್ರವಾಗಿ ನಡೆದು ಹೋಗುತ್ತದೆ. ನೇಕಾರ ಮಾಮೂಲಿ ಕೊಡಲಾರನೆಂಬುದು ನೇಕಾರರ ದುರಂತವಾಗಿದೆ. ಬಟ್ಟೆ ಮಾರುವ ಜವಳಿ ಸಚಿವಾಲಯ, ಕೊಳ್ಳುವ ಶಿಕ್ಷಣ ಸಚಿವಾಲಯ ಎರಡರಲ್ಲೂ ಕೈಮಗ್ಗದ ಬಗ್ಗೆ ಆಸಕ್ತಿಯಿಲ್ಲ. ಗಾಂಧಿ ಹೆಸರು ಹೇಳುವ ರಾಜಕಾರಣಿಗಳಿಗೂ ಕೈಮಗ್ಗದಲ್ಲಿ ಆಸಕ್ತಿಯಿಲ್ಲ. ಒಂದು ಕಾಲದಲ್ಲಿ, ಕರ್ನಾಟಕದ ನಾಲ್ಕೂ ಆಡಳಿತ ವಿಭಾಗಗಳ ವ್ಯಾಪ್ತಿಯಲ್ಲಿ ಕೈಮಗ್ಗದ ಬಟ್ಟೆಯನ್ನು ಖರೀದಿಸುತ್ತಿದ್ದ ಶಿಕ್ಷಣ ಇಲಾಖೆಯು ಈಗ ಮೂರು ವಿಭಾಗಗಳಲ್ಲಿ ಪವರ್ಲೂಮಿನ ಬಟ್ಟೆ ಖರೀದಿಸುತ್ತಿದೆ. ಒಂದು ವಿಭಾಗ ಮಾತ್ರ ಉಳಿದಿದೆ. ಅದೂ, ಮುದುಕರ ಹಲ್ಲಿನಂತೆ, ಅಲುಗಾಡುತ್ತ, ಜೀವಕ್ಕಂಟಿಕೊಂಡಿದೆ.
ಸಿದ್ದರಾಮಯ್ಯನವರಿಗೆ ವಿಷಯ ತಿಳಿಯದಿರಬಹುದು. ತಿಳಿದರೆ, ಸಮಾಜವಾದಿಯಾದ ಅವರು ಮಧ್ಯ ಪ್ರವೇಶಿಸಿ ನಾಲ್ಕೂ ಆಡಳಿತ ವಿಭಾಗಗಳಲ್ಲಿ ಕೈಮಗ್ಗ ವಸ್ತ್ರವನ್ನೇ ಕೊಳ್ಳುವಂತೆ ಅಂತರ್ ಇಲಾಖಾ ನಿರ್ಧಾರವನ್ನು ಜಾರಿಗೊಳಿಸುತ್ತಾರೆ ಎಂಬ ಆಶಯ ನನ್ನದು. ಶಿಕ್ಷಣ ಮಂತ್ರಿಗಳು ಹಾಗೂ ಜವಳಿ ಮಂತ್ರಿಗಳು ನೇಕಾರನ ಕಡೆ ದೃಷ್ಟಿ ಹರಿಸುತ್ತಾರೆ ಎಂದೂ ಆಶಿಸುತ್ತೇನೆ ನಾನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.