ರಾಜಾಸ್ತಾನಕ್ಕೆ ಕಾಂಗ್ರೆಸ್ ಸರ್ಕಾರ
ದೆಹಲಿ, ಏ. 25– ರಾಜಾಸ್ತಾನದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಅಂತ್ಯಗೊಳಿಸಲು ರಾಜ್ಯಪಾಲರು ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಬುಧವಾರದಿಂದ ಅಂತ್ಯಗೊಳಿಸಲು ನಿರ್ಧರಿಸಿತು.
ನಾಳೆ ಶ್ರೀ ಮೋಹನ್ಲಾಲ್ ಸುಖಾಡಿಯಾರವರ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದು.
‘ಎಲ್ಲರಿಗೂ ಒಂದೇ’
ನವದೆಹಲಿ, ಏ. 25– ಸರ್ಕಾರದಲ್ಲಿರುವ ಮುಸ್ಲಿಂ ನೌಕರರು ಒಬ್ಬಳಿಗಿಂತ ಹೆಚ್ಚು ಹೆಂಡತಿಯರನ್ನು ಹೊಂದಿರಕೂಡದು ಎಂದು ಗೃಹ ಸಚಿವ ಶಾಖೆ ಸ್ಪಷ್ಟೀಕರಿಸಿದೆ.
ಲೋಕಸಭೆಯಲ್ಲಿ ಕೆಲವು ದಿನಗಳ ಹಿಂದೆ ಈ ವಿಷಯ ಪ್ರಸ್ತಾಪಕ್ಕೆ ಬಂದಿತ್ತು. ಪರಿಶೀಲಿಸಿ ಸ್ಪಷ್ಟೀಕರಣ ನೀಡುವುದಾಗಿ ಆಗ ಸರ್ಕಾರ ತಿಳಿಸಿತು.
ಕೇಂದ್ರ ಸಿವಿಲ್ ಸರ್ವಿಸ್ (ನಡತೆ) ನಿಯಮಾವಳಿಯ 21ನೆಯ ವಿಧಿ, ಜಾತಿ ಅಥವಾ ಕುಲದ ತಾರತಮ್ಯವಿಲ್ಲದೆ ಎಲ್ಲ ಸರ್ಕಾರಿ ನೌಕರರಿಗೂ ಅನ್ವಯವಾಗುವುದೆಂದು ಸಚಿವ ಶಾಖೆ ತಿಳಿಸಿದೆ. ಆ ನಿಯಮ ಈ ರೀತಿ ಇದೆ. 1) ಒಬ್ಬ ಹೆಂಡತಿ ಜೀವಂತವಾಗಿರುವಾಗ ಸರ್ಕಾರದ ಅನುಮತಿಯನ್ನು ಪಡೆಯದೆ ಯಾವ ಸರ್ಕಾರಿ ನೌಕರನೂ ಎರಡನೆಯ ಮದುವೆಯಾಗಕೂಡದು.
2) ಸರ್ಕಾರಿ ಮಹಿಳಾ ನೌಕರರು ಸರ್ಕಾರದ ಅನುಮತಿಯಿಲ್ಲದೆ ಒಬ್ಬ ಹೆಂಡತಿಯಿರುವ ವ್ಯಕ್ತಿಯೊಡನೆ ಮದುವೆಯಾಗಕೂಡದು.
ರಾಡಾರ್ ಯಂತ್ರ ತಯಾರಿಕೆಯಲ್ಲಿ ಬಿ.ಇ.ಎಲ್. ಪ್ರಗತಿ
ಬೆಂಗಳೂರು, ಏ. 25– ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿ 30 ಕೋಟಿ ರೂಪಾಯಿ ಬೆಲೆ ಬಾಳುವಷ್ಟು ವಿದ್ಯುತ್ ಉಪಕರಣಗಳನ್ನು ತಯಾರು ಮಾಡಲಿದೆ.
ರಾಡಾರ್ ತಯಾರಿಕೆಯಲ್ಲಿ ಬಿ.ಇ.ಎಲ್ ಪರಿಣಾಮಕಾರಿಯಾದ ಪ್ರಗತಿ ಸಾಧಿಸಿದ್ದು, 5 ಕೋಟಿ ರೂಪಾಯಿ ಬೆಲೆ ಬಾಳುವಷ್ಟು ರಾಡಾರ್ಗಳನ್ನು ಒದಗಿಸಬೇಕೆಂದು ರಕ್ಷಣಾ ಇಲಾಖೆ ಕೇಳಿದೆ. ಪ್ರತಿ ರಾಡಾರ್ ಬೆಲೆ 10 ಲಕ್ಷದಿಂದ 15 ಲಕ್ಷ ರೂಪಾಯಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.