ADVERTISEMENT

ಬುಧವಾರ, 26–7–1967

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST

ನದಿ ನೀರು ವಿವಾದ: ಶೀಘ್ರ ಸಭೆಯ ಭರವಸೆ

ನವದೆಹಲಿ, ಜುಲೈ 25– ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸರ್ಕಾರಗಳ ಎಂಜಿನಿಯರ್‌ಗಳನ್ನು ಕರೆದು ಚರ್ಚಿಸಿ ಅಂತರರಾಜ್ಯ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದವನ್ನು ಪರಿಹರಿಸಲಾಗುವುದು ಎಂದು ಕೆಂದ್ರದ ನಿರಾವರಿ ಸಚಿವ ಶ್ರೀ ಕೆ.ಎಲ್‌. ರಾವ್‌ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಗೆ ಹೋಗಿದ್ದ ಕಾಂಗ್ರೆಸ್‌ ಸಂಸದ ಶ್ರೀ ಸಿ.ಎಂ. ಪೂಣಚ್ಚ ನೇತೃತ್ವದ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮಾರಾಟ: ಭಾರತ ಕಳವಳ

ನವದೆಹಲಿ, ಜುಲೈ 25– ಪಶ್ಚಿಮ ಜರ್ಮನಿಯು ಅಮೆರಿಕದಲ್ಲಿ ತಯಾರಾದ ಕೆಲವು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದೆ ಎಂದು ವರದಿಯಾಗಿದ್ದು, ಅದಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಸಿ.ಎಸ್‌. ಝಾ ಅವರು ಇಂದು ಅಮೆರಿಕ ಹಾಗೂ ಪಶ್ಚಿಮ ಜರ್ಮನಿಯ ರಾಯಭಾರಿ ಕಚೇರಿಗಳ ಹಿರಿಯ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿರೋಧ ದಾಖಲಿಸಿದ್ದಾರೆ.

ಪಶ್ಚಿಮ ಜರ್ಮನಿಯು ಈಗಾಗಲೇ ಪಾಕಿಸ್ತಾನಕ್ಕೆ ಅಮೆರಿಕದಲ್ಲಿ ತಯಾರಾದ ಟ್ಯಾಂಕರ್‌ಗಳನ್ನು ಮಾರಾಟ ಮಾಡಿದೆ ಎಂದು ಕೆಲವು ವಿದೇಶಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು? ನಿಜವಾಗಿಯೂ ಮಾರಾಟ ಒಪ್ಪಂದ ಮುಗಿದಿದೆಯೇ ಅಥವಾ ಒಪ್ಪಂದ ಆಗಬೇಕೇ ಎಂಬ ಮಾಹಿತಿಯನ್ನು ತಿಳಿಯಲು ಭಾರತ ಬಯಸಿದೆ ಎಂದು ಭಾರತೀಯ ಅಧಿಕಾರಿ ತಿಳಿಸಿದ್ದಾರೆ.

ಉತ್ತರಪ್ರದೇಶ ವಿಧಾನಸಭೆಯಲ್ಲಿ ಮಾರಾಮಾರಿ

ಉತ್ತರಪ್ರದೇಶ ವಿಧಾನಸಭೆಯಲ್ಲಿ ಇಂದು ಶಾಸಕರು ಪರಸ್ಪರ ಹೊಡೆದಾಟ ನಡೆಸಿದ ಕಾರಣ ಅರ್ಧ ಗಂಟೆಗೂ ಹೆಚ್ಚುಕಾಲ ಕಲಾಪಕ್ಕೆ ತೊಂದರೆಯಾಯಿತು. ನೀರಾವತಿ ಇಲಾಖೆಗೆ ಅನುದಾನ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದಾಗ ಸದಸ್ಯರು ಹೊಡೆದಾಡಿದ್ದಾರೆ.

ಹೊಡೆದಾಟಕ್ಕೆ ಇಳಿದ ಶಾಸಕರನ್ನು ನಿಯಂತ್ರಿಸಲು ಸ್ಪೀಕರ್‌ ವಿಫಲರಾದರು. ಕೊನೆಗೆ ಕಲಾಪವನ್ನು ಅರ್ಧ ಗಂಟೆ ಕಾಲ ಮುಂದೂಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.