ADVERTISEMENT

ಭಾನುವಾರ 11–6–1967

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST

* ಇಸ್ರೇಲ್‌ಗೆ ಕಮ್ಯುನಿಸ್ಟ್ ರಾಷ್ಟ್ರಗಳ ಎಚ್ಚರಿಕೆ
ಮಾಸ್ಕೊ, ಜೂ. 10–
ಇಸ್ರೇಲ್ ದಾಳಿಯನ್ನು ನಿಲ್ಲಿಸಿ, ಕದನ ವಿರಾಮ ಗಡಿಯ ಹಿಂದಕ್ಕೆ ವಾಪಸಾಗದಿದ್ದರೆ ತಾವು ಅರಬ್ ರಾಷ್ಟ್ರಗಳಿಗೆ ಸಹಾಯ ಮಾಡುವುದಾಗಿ ರಷ್ಯ, ಯುಗೊಸ್ಲಾವಿಯ ಮತ್ತು ಮತ್ತೆ ಐದು ಪೂರ್ವ ಯೂರೋಪ್ ರಾಷ್ಟ್ರಗಳು ಇಂದು ಬೆದರಿಕೆ ಹಾಕಿದವು. ಆದರೆ ಈ ಕದನ ವಿರಾಮ ಗಡಿ ಯಾವುದು, ಎಂದರೆ 1948ರದೆ ಅಥವಾ 1956ರದೆ ಎಂಬುದನ್ನು ಈ ರಾಷ್ಟ್ರಗಳು ಸ್ಪಷ್ಟಪಡಿಸಲಿಲ್ಲ.

* ಕೈರೊದಲ್ಲಿ ರಷ್ಯನ್ ರಾಯಭಾರಿ ಕಚೇರಿ ಮೇಲೆ ಹಲ್ಲೆಗೆ ಯತ್ನ
ಕೈರೊ, ಜೂ. 10–
ಇಲ್ಲಿನ ಸೋವಿಯತ್ ರಾಯಭಾರಿ ಕಚೇರಿಯ ಮೇಲೆ ಹಲ್ಲೆ ಮಾಡಲು ಅರಬ್ ಪ್ರದರ್ಶನಕಾರರು ನಿನ್ನೆ ಮೂರು ಬಾರಿ ಯತ್ನಿಸಿದರು. ಕಚೇರಿಯನ್ನು ಸುತ್ತುವರಿದಿರುವ ಬೇಲಿಯನ್ನು ದಾಟಿ ಒಳನುಗ್ಗಲು ಯತ್ನಿಸುತ್ತಿದ್ದ ಪ್ರದರ್ಶನಕಾರರೆಡೆ ಗುಂಡು ಹಾರಿಸಿದ್ದರಿಂದ ಅವರು ಪಲಾಯನ ಮಾಡಿದರು.

* ಜನತೆ ವಿಶ್ವಾಸಕ್ಕೆ ಮಣಿದ ನಾಸೆರ್
ಕೈರೋ, ಜೂ. 10
– ತಮ್ಮ ರಾಜೀನಾಮೆಯನ್ನು ತಿರಸ್ಕರಿಸುವ ಜನತೆಯ ದೃಢ ನಿರ್ಧಾರ, ಆದರೂ ವಿಶ್ವಾಸಗಳಿಂದ ತಮ್ಮ ಮನಸ್ಸಿನಲ್ಲಿ ಉಂಟಾಗಿರುವ ಭಾವನೆಗಳನ್ನು ಯಾರೂ ಊಹಿಸಲಾರರು ಎಂದು ಅಧ್ಯಕ್ಷ ನಾಸೆರ್ ಅವರು ಕಳುಹಿಸಿದ ಸಂದೇಶವನ್ನು ಅವರ ಪರವಾಗಿ ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಓದಲಾಯಿತು.

ADVERTISEMENT

‘ನನ್ನ ಹೃದಯ ತುಂಬಿ ಹೋಗಿದೆ. ಅದನ್ನು ವ್ಯಕ್ತಪಡಿಸಲು ಶಬ್ದಗಳೇ ನನಗೆ ದೊರಕುತ್ತಿಲ್ಲ’ ಎಂದು ಅವರು ತಿಳಿಸಿದ್ದಾರೆ. ಅಧ್ಯಕ್ಷ ನಾಸೆರ್ ಅವರು ಅಧಿಕಾರದಲ್ಲಿ ಮುಂದುವರಿಯಬೇಕೆಂದು ಒತ್ತಾಯಪಡಿಸಲು ಜನ ತಂಡೋಪತಂಡವಾಗಿ ರಾಜಧಾನಿಗೆ ಬರುತ್ತಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅರಬ್ ಜಗತ್ತಿನ ಪ್ರಮುಖ ವ್ಯಕ್ತಿಯಾಗಿ ಬೆಳಗಿದ ತಮ್ಮ ನಾಯಕ ನಿನ್ನೆ ಪ್ರಕಟಿಸಿದ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿರುವರೇ ಎನ್ನುವುದನ್ನು ತಿಳಿಯಲು ಇಡೀ ಈಜಿಪ್ಟ್ ಕಾತರದಿಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.