* ದೇಶದ ಏಕತೆಗೆ ಶಿವಸೇನೆ ಮಾರಕ: ರಾಮಕೃಷ್ಣ ಹೆಗಡೆ
ಬೆಂಗಳೂರು, ಜುಲೈ 23– ‘ಶಿವಸೇನೆಯಂಥ ಸಂಘಟನೆ ದೇಶದ ಏಕತೆಗೆ ಮಾರಕವಾಗಿದ್ದು, ಇಂಥ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು’ ಎಂದು ವಿತ್ತ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಇಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಹಿಂದಿ ವೇದಿಕೆಯವರು ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ‘ದೇಶದ ಏಕತೆ ಮತ್ತು ಸಮಗ್ರತೆಗೆ ಶಿವಸೇನೆಯಂಥ ಸಂಘಟನೆ ಅಪಾಯಕಾರಿ’ ಎಂದರು.
‘ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಎಂಬುದರಲ್ಲಿ ಸಂದೇಹವಿಲ್ಲ. ಹಿಂದಿಯೇತರ ಪ್ರದೇಶಗಳಲ್ಲೂ ಶಿಕ್ಷಣದಲ್ಲಿ ಪ್ರಾಥಮಿಕ ಹಂತದಿಂದಲೇ ಹಿಂದಿ ಬೋಧನೆ ಕಡ್ಡಾಯ ಮಾಡಿದರೆ ಮುಂದಿನ ಹತ್ತು ಹನ್ನೆರಡು ವರ್ಷಗಳಲ್ಲಿ ಈ ಕುರಿತ ವಿವಾದ ಕೊನೆಗೊಳ್ಳುತ್ತದೆ’ ಎಂದು ಶ್ರೀ ಹೆಗಡೆ ಹೇಳಿದರು.
* ರಾಜೀನಾಮೆಗೆ ಸಿದ್ಧ: ಮಿಶ್ರಾ
ನವದೆಹಲಿ, ಜುಲೈ 23– ‘ನನ್ನ ರಾಜೀನಾಮೆಯಿಂದ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹಾರವಾಗುವುದಾದರೆ ನಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಡಿ.ಪಿ. ಮಿಶ್ರಾ ಹೇಳಿದ್ದಾರೆ.
ಈ ಅಭಿಪ್ರಾಯವನ್ನು ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್, ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸೇರಿದಂತೆ ಪಕ್ಷದ ಇತರ ಹಿರಿಯ ಮುಖಂಡರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದ ವಿರುದ್ಧ ಬಂಡಾಯ ನಡೆಸಿರುವ ಕೆಲವರು ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿಮಾಡಿ, ‘ಮಿಶ್ರಾ ಅವರು ರಾಜೀನಾಮೆ ಕೊಟ್ಟರೆ ಸಮಸ್ಯೆ ಬಗೆಹರಿಯುತ್ತದೆ’ ಎಂದು ಹೇಳಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಯ ಹಿನ್ನೆಲೆಯಲ್ಲಿ ಮಿಶ್ರಾ ಈ ತೀರ್ಮಾನಕ್ಕೆ ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.