ನಾಗೇಶ ಹೆಗಡೆಯವರು ‘ಅಣುಶಕ್ತಿ ಎಂಬ ಭಸ್ಮಾಸುರ’ನ ಬಗ್ಗೆ ನಿರಂತರವಾಗಿ ಎಚ್ಚರಿಸುತ್ತಲೇ ಇದ್ದಾರೆ.
‘ಪ್ರಜಾವಾಣಿ’ಯ ಜುಲೈ 13ರ ಸಂಚಿಕೆಯಲ್ಲಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ನ ಅವಾಂತರಗಳ ಬಗ್ಗೆ ಬರೆದಿದ್ದಾರೆ. ಇದನ್ನು ಓದಿದಾಗ ನನಗೆ ಪಂಚತಂತ್ರದ ಒಂದು ಕತೆ ನೆನಪಾಯಿತು.
ಮೂವರು ‘ಯುವ’ ಪಂಡಿತರು ಕಾಡಿನ ಮೂಲಕ ಹಾದು ಹೋಗುತ್ತಿರುತ್ತಾರೆ. ದಾರಿಯಲ್ಲಿ ಯಾವುದೋ ಪ್ರಾಣಿಯ ಎಲುಬುಗಳು ಬಿದ್ದಿರುವುದನ್ನು ನೋಡುತ್ತಾರೆ. ಒಬ್ಬ ಪಂಡಿತ ತನ್ನ ವಿದ್ಯೆಯನ್ನು ಉಪಯೋಗಿಸಿ ಆ ಎಲುಬುಗಳು ಒಂದಕ್ಕೊಂದು ಸೇರಿಕೊಳ್ಳುವಂತೆ ಮಾಡಿದ. ಇನ್ನೊಬ್ಬ ಪಂಡಿತ ಅದಕ್ಕೆ ಮಾಂಸ ಚರ್ಮ ತುಂಬಿಕೊಳ್ಳುವಂತೆ ಮಾಡಿದ.
ಆಗ ಅದು ಒಂದು ಸಿಂಹದ ರೂಪ ತಳೆಯಿತು. ಮೂರನೇ ಪಂಡಿತ ಅದಕ್ಕೆ ತನ್ನ ವಿದ್ಯೆಯಿಂದ ಜೀವ ತುಂಬಲು ಹೊರಟ. ಅವರ ಜೊತೆ ಒಬ್ಬ ಪಂಡಿತನಲ್ಲದ (ನಾಗೇಶ ಹೆಗಡೆ) ಯುವಕನೂ ಇರುತ್ತಾನೆ. ಅವನು ‘ಅಯ್ಯಾ ತಡೆಯಿರಿ ಅದಕ್ಕೆ ಜೀವ ಬಂದರೆ ನಮ್ಮನ್ನೇ ತಿನ್ನುತ್ತದೆ’ ಎಂದ.
ಆದರೆ ಅವರು ಅವನ ಮಾತನ್ನು ಲಕ್ಷಿಸದೇ ಅವನನ್ನು ಹೀಯಾಳಿಸುತ್ತಾರೆ. ಅವನು ಕೂಡಲೇ ಮರವೇರಿ ಕುಳಿತು ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಆನಂತರ ಪಂಡಿತ ಯುವಕರು ಸಿಂಹಕ್ಕೆ ಜೀವ ಬರಿಸುತ್ತಾರೆ. ಜೀವ ಬಂದ ಕೂಡಲೇ ಸಿಂಹ ಆ ಮೂವರೂ ಪಂಡಿತರನ್ನು ತಿಂದು ಹಾಕುತ್ತದೆ. ಆದರೆ ಅಣುಶಕ್ತಿ ಸಿಂಹವಲ್ಲ, ರಾಕ್ಷಸ. ಅದು ಎಲ್ಲರನ್ನೂ ನಾಶಮಾಡುತ್ತದೆ.
-ಪ್ರೊ. ಶಶಿಧರ ಪಾಟೀಲ, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.