ಸಾಹಿತ್ಯ ಸಮಾರಂಭಗಳ ಇತ್ತೀಚಿನ ಆಹ್ವಾನ ಪತ್ರಿಕೆಗಳಲ್ಲಿ ‘ನಮ್ಮೊಂದಿಗೆ…’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಸಾಹಿತಿಗಳ ಇಷ್ಟುದ್ದ ಪಟ್ಟಿಯನ್ನು ಪ್ರಕಟಿಸುವ ವಿಧಾನ ಕಂಡುಬರುತ್ತಿದೆ. ಎಷ್ಟೋ ಬಾರಿ ಆ ಪಟ್ಟಿಯಲ್ಲಿರುವ ಸಾಹಿತಿಗಳ ಒಪ್ಪಿಗೆಯನ್ನೂ ಪಡೆಯದೆ ಅವರ ಹೆಸರನ್ನು ಪ್ರಕಟಿಸುವ ಯಜಮಾನಿಕೆ ಗೋಚರಿಸುತ್ತದೆ.
ಈ ಪಟ್ಟಿಯ ಉದ್ದೇಶವೇನು? ಆಹ್ವಾನಿತರಿಗೆ ಅದರಿಂದ ತಿಳಿಯಪಡಿಸುವುದಾದರೂ ಏನು? ತಮ್ಮ ಸಾಹಿತ್ಯದ ಗುಂಪು ಯಾವುದು ಎಂದು ತಿಳಿಸುವ, ತಮ್ಮ ಗುಂಪಿನಲ್ಲಿ ಯಾರ್ಯಾರಿದ್ದಾರೆ ಎಂದು ಜಗಜ್ಜಾಹೀರುಗೊಳಿಸುವ ಗೂಢ ಉದ್ದೇಶವನ್ನು ಇದು ಹೊಂದಿರುವಂತೆ ಕಾಣುತ್ತದೆ.
ಇದೊಂದು ತರಹ ರಾಜಕೀಯ ನಾಯಕರು ಆಗಾಗ ತಮ್ಮ ಶಕ್ತಿಪ್ರದರ್ಶನ ಮಾಡುವುದಕ್ಕಾಗಿ ಜನರನ್ನು ಜಮಾಯಿಸುವ ಕಿರುಮಾದರಿಯಾಗಿ ನನಗೆ ಕಾಣುತ್ತದೆ. ಆಹ್ವಾನ ಪತ್ರಿಕೆ ಪಡೆದವರು ತಾವು ಆ ಕಾರ್ಯಕ್ರಮಕ್ಕೆ ಹೋಗಬೇಕೋ ಬಾರದೋ ಎಂಬ ಗೊಂದಲವನ್ನು ಉಂಟು ಮಾಡಿಸುತ್ತದೆ.
ಗುಂಪುಗಾರಿಕೆ ಎನ್ನುವುದು ಸಾಹಿತ್ಯದ ಒಟ್ಟಾರೆ ಸದುದ್ದೇಶವನ್ನೇ ಹಾಳುಗೆಡವುತ್ತದೆ. ಸಾಹಿತ್ಯವೆನ್ನುವುದು ಇಡೀ ಸಮುದಾಯಕ್ಕೆ ಸಂಬಂಧಿಸಿದ ಚಟುವಟಿಕೆ. ಆದ್ದರಿಂದ ಶುದ್ಧ ಸಾಹಿತ್ಯಾಸಕ್ತರು ಇಂಥ ಧೋರಣೆಯನ್ನು ವಿರೋಧಿಸುವ ಅವಶ್ಯಕತೆಯಿದೆ. ‘ನಮ್ಮೊಂದಿಗೆ’ ಇಡೀ ಸಜ್ಜನ ಸಮಾಜವಿದೆ ಎಂಬ ಭಾವನೆ ಇರಬೇಕೆ ಹೊರತು, ಒಂದಿಷ್ಟು ಸಾಹಿತಿಗಳ ಪಟ್ಟಿಯಲ್ಲ.
-ವಸುಧೇಂದ್ರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.