ADVERTISEMENT

ದ್ರೋಹಿಗಳು ಯಾರು?

ಮಂಜುನಾಥ ಸು.ಮ.
Published 15 ನವೆಂಬರ್ 2017, 4:07 IST
Last Updated 15 ನವೆಂಬರ್ 2017, 4:07 IST

‘ಭಾರತ ಕಾಶ್ಮೀರಿಗಳಿಗೆ ದ್ರೋಹ ಬಗೆದಿದೆ’ ಎಂದು ಫಾರೂಕ್ ಅಬ್ದುಲ್ಲಾ ಈಚೆಗೆ ಹೇಳಿಕೆ ನೀಡಿದ್ದಾರೆ. ಭಾರತದ ವಿರುದ್ಧ ಇಂಥ ಆರೋಪ ಮಾಡಿರುವ ಫಾರೂಕ್‌ ಅವರಿಗೆ ಕೆಲವು ವಿಚಾರಗಳನ್ನು ನೆನಪಿಸಿಕೊಡಬೇಕಾಗಿದೆ.

ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರನಿಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಸ್ಥಾನ ಹಾಗೂ ಕೇಂದ್ರದಲ್ಲಿ ಪ್ರಮುಖ ಸಚಿವ ಸ್ಥಾನಗಳನ್ನು ನೀಡಿ, ‘ಕಾಶ್ಮೀರಿಗಳ ಉದ್ಧಾರ ಮಾಡಿ’ ಎಂದು ಭಾರತ ಹೇಳಿರಲಿಲ್ಲವೇ?

ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದಾಗ ಕಾಶ್ಮೀರಕ್ಕೆ 370ನೇ ವಿಧಿಯಂತೆ ಪ್ರತ್ಯೇಕ ಸ್ಥಾನಮಾನ ನೀಡಿ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿಲ್ಲವೇ? ಆಗಿನಿಂದ ಫಾರೂಕ್‌ ಅವರ ಕುಟುಂಬ ರಾಜ್ಯದ ಜನರಲ್ಲಿ ಪ್ರತ್ಯೇಕತೆಯ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿಲ್ಲವೇ? ಹಿಂಸೆಗೆ ಹೆದರಿ ಕಾಶ್ಮೀರದಿಂದ ಓಡಿ ಹೋಗಿರುವ ಕಾಶ್ಮೀರಿ ಪಂಡಿತರ ಜಮೀನನ್ನು ಸ್ಥಳೀಯರು ಅನುಭವಿಸುತ್ತಿರುವುದು ಸುಳ್ಳೇ?

ADVERTISEMENT

ವಾಸ್ತವದಲ್ಲಿ ಫಾರೂಕ್‌ ಅಬ್ದುಲ್ಲಾ ಹಾಗೂ ಅವರ ಕುಟುಂಬದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸ್ಥಾನಮಾನ ಕೊಟ್ಟಿದ್ದೇ ಭಾರತವು ಕಾಶ್ಮೀರಿಗಳಿಗೆ ಮಾಡಿರುವ ಅನ್ಯಾಯ. ಈಗ ಯಾವುದೇ ಅಧಿಕಾರ ಇಲ್ಲದಿರುವುದರಿಂದ ಫಾರೂಕ್‌ ಅವರಿಗೆ ‘ಕಾಶ್ಮೀರಿಗಳಿಗೆ ಅನ್ಯಾಯವಾಗಿದೆ’ ಎಂಬ ಭಾವನೆ ಬರುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.