ADVERTISEMENT

ನಿಜ ಆಶಯವೇನು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಮೇ 2016, 19:30 IST
Last Updated 23 ಮೇ 2016, 19:30 IST

ರಾಜ್ಯ ಸರ್ಕಾರ ನಡೆಸಿರುವ ಜಾತಿ ಸಮೀಕ್ಷೆ ವರದಿ ಇನ್ನೇನು ಪ್ರಕಟಗೊಳ್ಳಬೇಕಾಗಿದೆ. ಇದರ ಬೆನ್ನಲ್ಲೇ ಬೀದರ್‌ನ ಲಿಂಗಾಯತ ಪಂಚಮಸಾಲಿ ಪಂಗಡಕ್ಕೆ ಸೇರಿದ ಐವರು, ಜಾತಿ ಸಮೀಕ್ಷೆ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಮುಂದು ಮಾಡಿ ಹೈಕೋರ್ಟ್‌ನಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಚಾರಣೆಗೆ ಬಾಕಿ ಇರುವ ಬಗ್ಗೆ ವರದಿಯಾಗಿದೆ  (ಪ್ರ.ವಾ., ಮೇ 23).

ಜಾತಿಯ ಹೆಸರಿನಲ್ಲಿ ಮಠಗಳು, ಸಂಘಟನೆಗಳು ಹುಟ್ಟಿಕೊಂಡಿವೆ. ಹಾಗೆಯೇ ಬಹುತೇಕ ಹಳ್ಳಿಗಳಲ್ಲಿ, ಅನೇಕ ಪಟ್ಟಣ ಪ್ರದೇಶಗಳಲ್ಲಿ ಈಗಲೂ ನಿರ್ದಿಷ್ಟ ಜಾತಿಯ ಜನರು ಒಂದೊಂದು ಬೀದಿಯಲ್ಲಿ ವಾಸಿಸುತ್ತಿದ್ದಾರೆ.

ಸಮೀಕ್ಷೆ, ಸಮಾಜವನ್ನು ಒಡೆಯುವ ಉದ್ದೇಶ ಹೊಂದಿದೆ ಎನ್ನುವವರಿಗೆ ಇವೆಲ್ಲ ಸಮಾಜವನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿ ಕಾಣಿಸುತ್ತಿಲ್ಲವೇ? ಆಗಲಿ, ಪ್ರಶ್ನಿಸುವವರ ಸಾಮಾಜಿಕ ಕಳಕಳಿಯನ್ನು ಒಪ್ಪಿಕೊಳ್ಳೋಣ.

ಇವರೆಲ್ಲರೂ ‘ಜಾತಿ ಕೇಂದ್ರಿತವಾದ ಮಠಗಳು, ಸಂಘಟನೆಗಳು ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತವೆ, ಆದ್ದರಿಂದ ಇವುಗಳನ್ನು ನಿಷೇಧಿಸಿ ಇವುಗಳ ಬದಲಾಗಿ ಸರ್ವ ಜಾತಿಯ ಜನರ ಪಾಲ್ಗೊಳ್ಳುವಿಕೆ ಇರುವ ಸಂಘಟನೆಗಳನ್ನು ಅಸ್ತಿತ್ವಕ್ಕೆ ತರಬೇಕು.

ಸಂವಿಧಾನದಲ್ಲಿ ಹೇಳಿರುವಂತೆ ಯಾವುದೇ ನಾಗರಿಕ ಎಲ್ಲಿ ಬೇಕಾದರೂ ಮುಕ್ತವಾಗಿ ಸಂಚರಿಸುವಂತೆ, ವಾಸಿಸುವಂತೆ (ಜಾತಿಯ ಗತ್ಯಂತರವಿಲ್ಲದೆ) ಮಾಡುವುದರಿಂದ ಸಾಮಾಜಿಕ ಸಾಮರಸ್ಯ ಸ್ಥಾಪಿಸಬಹುದು’ ಎಂದು ಪ್ರತಿಪಾದಿಸುತ್ತಾರೆಯೇ?

ಈ ಬಗ್ಗೆ ಕಾನೂನು ಸಮರ ಹೂಡಲು  ಸಿದ್ಧರಿದ್ದಾರೆಯೇ? ಇವರಿಗೆ ನಿಜವಾಗಿ ಅಂತಹ ಕಾಳಜಿ ಇದ್ದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಾಣ ನಿಜವಾದ ಆಶಯವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.