₹ 500 ಮತ್ತು 1000 ಮೌಲ್ಯದ ನೋಟುಗಳ ರದ್ದತಿಗೆ ಕ್ರಮ ಕೈಗೊಂಡು ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೆ ಧಕ್ಕೆಯೊಡ್ಡಿದೆ ಎಂಬ ಕೂಗು ಕೇಳಿಬರುತ್ತಿದೆ. ವಿರೋಧ ಪಕ್ಷಗಳು ಸಹ ಈ ಮಾತನ್ನಾಡುತ್ತಿವೆ. ಆದರೆ ಈ ಹಿಂದಿನ ಆಡಳಿತ ವ್ಯವಸ್ಥೆಗಳಲ್ಲೂ ರಿಸರ್ವ್ ಬ್ಯಾಂಕ್ ಪರಮಾಧಿಕಾರ ಹೊಂದಿರಲಿಲ್ಲ ಎನ್ನುವುದು ಕೆಲವು ಸಂದರ್ಭಗಳಿಂದ ತಿಳಿದುಬರುತ್ತದೆ.
ಉದಾಹರಣೆಗೆ, 1969ರ ಜುಲೈ 23ರಂದು ಬ್ಯಾಂಕುಗಳ ರಾಷ್ಟ್ರೀಕರಣ ಆದಾಗ ಬ್ಯಾಂಕಿನ ಕೇಂದ್ರ ಸಮಿತಿಯ ಸಭೆಯಲ್ಲಿ ಒಂದು ನಿಗೂಢ ರೀತಿಯಲ್ಲಿ ಹೇಳಿಕೆ ಇಷ್ಟು ಮಾತ್ರ ದಾಖಲಾಯಿತು: ‘There was a brief discussion on the implications of bank nationalisation ordinance’. ಬೇರೆ ಯಾವ ವಿವರವೂ ದಾಖಲಾಗಲಿಲ್ಲ. ರಾಷ್ಟ್ರೀಕರಣ ಸುಗ್ರೀವಾಜ್ಞೆಯನ್ನು ಇದಕ್ಕೆ ಐದು ದಿನಗಳಿಗೆ ಮುಂಚೆ ಹೊರಡಿಸಲಾಗಿತ್ತು.
‘ಸ್ವರಾಜ್ಯ’ ಪತ್ರಿಕೆಯ ಇದೇ ಜನವರಿ 16ರ ‘RBI is legally bound to lose its battles for independence with the Government’ ಎಂಬ ಲೇಖನದಲ್ಲಿ ಶುಭೋಮೊಯಿ ಭಟ್ಟಾಚಾರ್ಜಿ ಅವರು, ಹಿಂದಿನ ಸರ್ಕಾರಗಳಿದ್ದಾಗ ಅವು ರಿಸರ್ವ್ ಬ್ಯಾಂಕ್ ಬಗ್ಗೆ ಯಾವ ಧೋರಣೆ ಹೊಂದಿದ್ದವು ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ನಾವು ಗಮನಿಸಬೇಕಾದ ಒಂದೆರಡು ಸಂಗತಿಗಳಿವೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಗಳಿಂದಾದ ಸರ್ಕಾರಕ್ಕೆ ಪರಮಾಧಿಕಾರ ಇರುತ್ತದೆ.
ಜನರಿಗೆ ಉತ್ತರದಾಯಿತ್ವ ಇಂಥ ಸರ್ಕಾರದ್ದು ಮಾತ್ರ. ರಿಸರ್ವ್ ಬ್ಯಾಂಕ್ ನೇರವಾಗಿ ಜನರಿಂದ ಸ್ಥಾಪಿತಗೊಂಡಿದ್ದಲ್ಲ. ಅದರ ಗವರ್ನರ್, ಡೆಪ್ಯುಟಿ ಗವರ್ನರ್ ಮತ್ತಿತರರನ್ನು ನೇಮಕ ಮಾಡುವುದು ಸರ್ಕಾರ. ಹೀಗಿರುವಾಗ, ಸರ್ಕಾರಕ್ಕೆ ಅದರ ಮೇಲೆ ನಿಯಂತ್ರಣ ಇದ್ದೇ ಇರುತ್ತದೆ ಮತ್ತು ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರವೂ ಇರುತ್ತದೆ.
ರಿಸರ್ವ್ ಬ್ಯಾಂಕಿಗೆ ಸ್ವಾಯತ್ತತೆ ಇರಬೇಕು ಎನ್ನುವ ವಾದ ಬೇರೆ. ಈಗಿರುವ ಸ್ಥಿತಿಯಲ್ಲಿ ಮತ್ತು ಹಿಂದಿನ ಸರ್ಕಾರಗಳು ತಳೆದ ರೀತಿನೀತಿಗಳ ಹಿನ್ನೆಲೆಯಲ್ಲಿ, ಈಗಿನ ಸರ್ಕಾರ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯನ್ನು ಹತ್ತಿಕ್ಕಿದೆ ಎನ್ನುವ ಟೀಕೆ ಅರ್ಥರಹಿತ ಎನಿಸುತ್ತದೆ.
-ಸಾಮಗ ದತ್ತಾತ್ರಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.