ಧರ್ಮದ ನೆಪದಲ್ಲಿ ರಾಜಕಾರಣಿಗಳು ಮಾತ್ರವಲ್ಲ ಮಠಾಧೀಶರೂ ಮನಸೋ ಇಚ್ಛೆ ಆರೋಪ- ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಕಳೆದ ಕೆಲವು ದಿನಗಳಿಂದ ಸಿದ್ದಗಂಗಾ ಶ್ರೀಗಳನ್ನೂ ಈ ಗೊಂದಲಕ್ಕೆ ಎಳೆದು ತಂದಿರುವುದು ಬೇಸರ ಮೂಡಿಸುತ್ತಿದೆ.
ಕಾಯಕವೇ ಧರ್ಮವೆನ್ನುವ ಸಿದ್ಧಾಂತದ ಮೇಲೆ ನಿರಂತರ ಸೇವಾ ಕಾರ್ಯಗಳಲ್ಲಿ ತೊಡಗಿರುವ, ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿರುವ ಸಿದ್ದಗಂಗಾ ಮಠವನ್ನು ಕೆಲವರು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಕೀಳುಮಟ್ಟದ ರಾಜಕಾರಣವಾಗಿದೆ.
ಮಠಕ್ಕೆ ಭಕ್ತರೇ ಆಸ್ತಿ, ಭಕ್ತರೇ ಸರ್ವಸ್ವ, ಭಕ್ತರೇ ಜೀವಾಳವೆನ್ನುವ ಭಾವನೆಯೊಂದಿಗೆ ಅನೇಕ ಮಠಗಳು ಸಾಮಾಜಿಕ ಸೇವೆಗಳಲ್ಲಿ ತೊಡಗಿವೆ. ರಾಜಕಾರಣಿಗಳು ಮಾಡದ ಕಾರ್ಯಗಳನ್ನು ಮಠಗಳು ಮಾಡುತ್ತಿರುವುದರಿಂದಲೇ ಇನ್ನೂ ಮನುಷ್ಯ ಸಂಬಂಧಗಳು ಉಳಿದಿವೆ. ರಾಜಕಾರಣಿಗಳಂತೂ ಒಡೆದು ಆಳುವುದೇ ರಾಜಕಾರಣ ಎಂದು ಭಾವಿಸಿದ್ದಾರೆ. ಮೊದಲು ಇದನ್ನು ನಿಲ್ಲಿಸಬೇಕು. ಆರೋಪ- ಪ್ರತ್ಯಾರೋಪಗಳಲ್ಲಿ ಅವರು ಬಳಸುವ ಕೀಳುಮಟ್ಟದ ಪದಗಳನ್ನು ಕೇಳಿ ಮತದಾರರು ತಲೆ ತಗ್ಗಿಸುವಂತಾಗಿದೆ.
–ಅಪ್ಪು ಮ.ಶಿರೋಳಮಠ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.