ADVERTISEMENT

ಪ್ರಸಿದ್ಧ ಗಾಯಕರೇಕೆ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 20:51 IST
Last Updated 15 ನವೆಂಬರ್ 2017, 20:51 IST

ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರು ದುಬಾರಿ ಸಂಭಾವನೆ ಕೇಳಿರುವುದು ವರದಿಯಾಗಿದೆ (ಪ್ರ.ವಾ., ನ.10).

ಗಾಯಕ ವಿಜಯ ಪ್ರಕಾಶ್ ಅವರು ₹ 13 ಲಕ್ಷ ಕೇಳುತ್ತಿದ್ದಾರಂತೆ. ಆದರೆ ಸಾಂಸ್ಕೃತಿಕ ಸಮಿತಿಗೆ ನಿಗದಿಪಡಿಸಿರುವ ಒಟ್ಟು ಮೊತ್ತ ₹ 40 ಲಕ್ಷ ಇದೆ ಎಂದಮೇಲೆ ಇಂತಹ ದುಬಾರಿ ಗಾಯಕರನ್ನು ಆಹ್ವಾನಿಸುವ ಅಗತ್ಯವೇನಿದೆ? ಇಷ್ಟಕ್ಕೂ ಮೈಸೂರಿನಲ್ಲಿ ನಡೆಯುತ್ತಿರುವುದು ಸಾಹಿತ್ಯ ಸಮ್ಮೇಳನವೇ ಹೊರತು ಸಂಗೀತ ಕಾರ್ಯಕ್ರಮ ಅಲ್ಲ. ಅಂದಮೇಲೆ, ಇಂಥ ಕಡೆಯೂ ಈಗಾಗಲೇ ಪ್ರಸಿದ್ಧಿ ಪಡೆದಿರುವ ಗಾಯಕರು, ನೃತ್ಯಪಟುಗಳಿಗೇ ಆಹ್ವಾನ ನೀಡುವ ಅಗತ್ಯವೇನಿದೆ?

ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಗಳಿಂದ ಜನರು ಬರುವುದು ಸಾಹಿತ್ಯಾಸಕ್ತಿಯಿಂದ. ಸಮ್ಮೇಳನದತ್ತ ಬರುವ ಸ್ಥಳೀಯರಲ್ಲಿ ಸಾಹಿತ್ಯಾಸಕ್ತರೊಂದಿಗೆ ಬೇರೆ ಬೇರೆ ಆಕರ್ಷಣೆಗಳ ಉದ್ದೇಶದಿಂದ ಬರುವವರೂ ಇರುತ್ತಾರೆ. ಸಮ್ಮೇಳನದಲ್ಲಿ ಪ್ರಸಿದ್ಧ ಗಾಯಕರ
ಆರ್ಕೆಸ್ಟ್ರಾ ಇದೆ ಎಂದೋ, ಸಿನಿಮಾ ನಟರು ನರ್ತಿಸುತ್ತಾರೆನ್ನುವ ಕಾರಣಕ್ಕೋ ಯಾರೂ ಬರುವುದಿಲ್ಲ ಎನ್ನುವ ಅರಿವು ಸಾಂಸ್ಕೃತಿಕ ಸಮಿತಿಗೆ ಇರಬೇಕು. ಅವಕಾಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಪ್ರತಿಭಾವಂತ ಗಾಯಕರು ನಾಡಿನಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ವೇದಿಕೆ ಕಲ್ಪಿಸುವ ಅಗತ್ಯವಿದೆ. ಪ್ರಸಿದ್ಧರನ್ನೇ ಮತ್ತೆ ಮತ್ತೆ ಏರಿಸಿ ಮೆರೆಸುವ ಬದಲು, ಹೊಸಬರಿಗೂ ಅವಕಾಶಗಳನ್ನು ಕೊಟ್ಟರೆ ‘ಪ್ರಸಿದ್ಧರು’ ದುಬಾರಿ ಬೇಡಿಕೆ ಇಡುವುದನ್ನು ಕಡಿಮೆ ಮಾಡಬಹುದು.

ADVERTISEMENT

-ಆರುಡೋ ಗಣೇಶ, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.