ADVERTISEMENT

ಮತ ಚಲಾಯಿಸದ ನೌಕರರಿಗೆ ಸಂಬಳವೇಕೆ?

ಜಿನದತ್ತ ದೇಸಾಯಿ, ಬೆಳಗಾವಿ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಭಾರತದ ಪ್ರಜಾಸತ್ತೆಯನ್ನು ಬಲಪಡಿಸು­ವಲ್ಲಿ ಸುಶಿಕ್ಷಿತರ ಪಾತ್ರ ಮಹತ್ವದ್ದಾಗಿದೆ. ಅವರ ಜವಾಬ್ದಾರಿ ಬೇರೆಯವರ ಜವಾಬ್ದಾರಿಗಿಂತ ಗುರುತರವಾಗಿದೆ. ಹೀಗಿದ್ದೂ ಇದೇ 17ರಂದು ರಾಜ್ಯದಲ್ಲಿ ನಡೆದ ಮತದಾನದಲ್ಲಿ ಬಹಳಷ್ಟು ಜನ ಸರ್ಕಾರಿ ನೌಕರರು ಮತ ಚಲಾಯಿಸಿಲ್ಲ  ಎನ್ನುವುದು ಕಳವಳಕಾರಿ ಸಮಾಚಾರ.

ಅಂದು ಅವರಿಗೆ ಕೊಟ್ಟ ರಜೆಯನ್ನು ಅವರು ಪರಸ್ಥಳಗಳಿಗೆ ಹೋಗುವುದಕ್ಕೊ ತಮ್ಮ ಇನ್ನಿತರ ಕೆಲಸಕ್ಕೊ ಬಳಸಿಕೊಂಡರೇ ಹೊರತು ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೋಸ್ಕರ ಅಲ್ಲ. ಅದು ಅವರಿಗೆ ಸಂಬಳ ಸಹಿತ ರಜಾ ದಿನ­ವಾಗಿತ್ತು. ಆದರೆ ಅದು ಷರತ್ತುರಹಿತ ರಜೆ­ಯಾಗಿರಲಿಲ್ಲ. ಮತ ಹಾಕಬೇಕು ಎನ್ನುವುದು ಮೊದಲನೆಯ ಅಂತರ್ಗತ ಷರತ್ತು. ಈ ಷರತ್ತನ್ನು ಪಾಲಿಸಿದವರಿಗೆ ಸಂಬಳದ ಸೌಲಭ್ಯವೂ ಲಭ್ಯ ಎನ್ನುವುದು ಎರಡನೆಯ ಅಂತ­ರ್ಗತ ಷರತ್ತು. ಮೊದಲನೆಯ ಷರತ್ತನ್ನು ಪಾಲಿಸದವರಿಗೆ ಸಂಬಳದ ಸೌಲಭ್ಯವನ್ನು ಪಡೆ­ಯುವ ಹಕ್ಕು ಪ್ರಾಪ್ತವಾಗಲಾರದು. ತಮ್ಮ ಕರ್ತವ್ಯ­ವನ್ನು ನಿರ್ವಹಿಸದೆ, ಕರ್ತವ್ಯಕ್ಕೆ ಅಂಟಿ­ಕೊಂಡ ಸೌಲಭ್ಯವನ್ನು ಕೇಳುವ ನೈತಿಕ ಹಕ್ಕು ಕರ್ತವ್ಯ ನಿರ್ಲಕ್ಷಿಸಿದ ನೌಕರರಿಗೆ ಸಿಕ್ಕಲಾರದು.

ಮತ ಚಲಾಯಿಸಿದ ಪುರಾವೆಯನ್ನೊದ­ಗಿಸಿದ ನೌಕರನಿಗೆ ಮಾತ್ರ ಆ ದಿನದ ಸಂಬಳ­ವನ್ನು ಕೊಡುವ ಬಗ್ಗೆ ಸರ್ಕಾರವು ಗಂಭೀರವಾಗಿ ಆಲೋಚಿಸಬೇಕು. ಸರ್ಕಾರದ ಖಜಾನೆಯ­ಲ್ಲಿರು­ವುದು ಸಾರ್ವಜನಿಕರ ಹಣ. ಅದನ್ನು ತಪ್ಪಿತಸ್ಥರಿಗೆ ನೀಡಲಾಗದು. ನೀಡಿದರೆ ಅದು ಬೇಜವಾಬ್ದಾರಿತನವನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.