ರೈಲ್ವೆ ಸಚಿವರಾಗಿ ಡಿ.ವಿ. ಸದಾನಂದಗೌಡರವರು 2014–15ನೇ ಸಾಲಿನ ರೈಲ್ವೆ ಆಯವ್ಯಯದಲ್ಲಿ ಬೆಂಗಳೂರು–ನೆಲಮಂಗಲಕ್ಕೆ ಡೆಮೋ ಮಾದರಿ ರೈಲುಗಳ ಸಂಚಾರವನ್ನು ಪ್ರಾರಂಭಿಸುವುದಾಗಿ ಪತ್ರಿಕಾ ಹೇಳಿಕೆಯನ್ನು ನೀಡಿರುವುದು ಸ್ವಾಗತಾರ್ಹ.
ಆದರೆ ದುರದೃಷ್ಟಕರ ಸಂಗತಿಯೆಂದರೆ ಈಗಾಗಲೇ ಬೆಂಗಳೂರು–ನೆಲಮಂಗಲಕ್ಕೆ ಬಂದು ಹೋಗುವ ಡೆಮೊ ರೈಲು ಸುಮಾರು 2 ಗಂಟೆಗೆ ಬೆಂಗಳೂರಿನಿಂದ ನೆಲಮಂಗಲಕ್ಕೆ ಬಂದು ಮತ್ತೆ ಇದೇ ರೈಲು ಬೆಂಗಳೂರಿಗೆ ಸುಮಾರು 2.30 ಗಂಟೆಗೆ ವಾಪಸ್ ಬರುತ್ತದೆ. ಈ ರೈಲು ನೆಲಮಂಗಲಕ್ಕೆ ಕೇವಲ ನಾಗರಿಕರ ಪ್ರದರ್ಶನಕ್ಕೆ ಬಂದು ಹೋದಂತೆ ಆಗುತ್ತಿದೆ.
ಈ ರೈಲು ಬಂದು ಹೋಗುವ ಸಮಯವು ಬೆಂಗಳೂರಿಗೆ ಕೆಲಸಕ್ಕೆ ಬರುವ ಉದ್ಯೋಗಿಗಳ ಕೆಲಸದ ವೇಳೆ ಆಗಲೀ, ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿ ವರ್ಗಕ್ಕೆ ಆಗಲೀ, ಯಶವಂತಪುರಕ್ಕೆ ಬೆಳೆದ ತರಕಾರಿ, ಹಣ್ಣು, ಹೂಗಳನ್ನು ಬೆಳಿಗ್ಗೆ ತಂದು ಮಾರಾಟ ಮಾಡುವ ರೈತ ವರ್ಗಕ್ಕೆ ಆಗಲೀ ಯೋಗ್ಯವಾದ ಸಮಯವಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲು ಸೇತುವೆ ಇದ್ದರೂ ವಾಹನ ದಟ್ಟಣೆಯಿಂದಾಗಿ ಈ ರಸ್ತೆಯ ಮೂಲಕ ನೆಲಮಂಗಲದಿಂದ ಬೆಂಗಳೂರು ತಲುಪಲು ಸುಮಾರು 2 ಗಂಟೆ ಬೇಕಾಗುತ್ತದೆ.
ಈ ಬಗ್ಗೆ ಗಮನಹರಿಸಿ ಈ ರೈಲನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರತಿ 2 ಗಂಟೆಗೆ ಒಮ್ಮೆ ಬೆಂಗಳೂರು–ನೆಲಮಂಗಲಕ್ಕೆ ಓಡಾಟದ ವ್ಯವಸ್ಥೆಯನ್ನು ಮಾಡಿಕೊಟ್ಟರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
–ಜಿ. ಸಿದ್ದಗಂಗಯ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.