ADVERTISEMENT

ಸಕಾಲಿಕ ಕ್ರಮ...

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 17:12 IST
Last Updated 1 ಮಾರ್ಚ್ 2015, 17:12 IST

‘ಭಾರತದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಟ್ಟರೆ ಅತ್ಯಂತ ಭ್ರಷ್ಟಗೊಂಡಿರುವ ಕ್ಷೇತ್ರ ವೈದ್ಯ­ಕೀಯ’ ಎಂಬುದಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಟ್ರಾನ್ಸಪರೆನ್ಸಿ ಇಂಟರ್‌­ನ್ಯಾಷನಲ್ ಹೊರಹಾಕಿದ ವರದಿ­ಯನ್ನು ಪುಷ್ಟೀಕರಿಸುವಂತೆ, ಖಾಸಗಿ ಔಷಧ ಕಂಪೆನಿ­ಯೊಂದರ ಹಣದಲ್ಲಿ ವಿದೇಶ ಪ್ರವಾಸ ಮಾಡಿ ಮರಳಿ ಬಂದ ಮಧ್ಯಪ್ರದೇಶದ ೧೧ ವೈದ್ಯರ ನಡತೆ ವಿಷಾದನೀಯ.

ಭಾರತೀಯ ವೈದ್ಯ­ಕೀಯ ಮಂಡಳಿ ಅವರ ಪರವಾನಗಿಯನ್ನು ೬ ತಿಂಗಳ ಮಟ್ಟಿಗೆ ಅಮಾನುತು ಮಾಡಿರು­ವುದು ಸೂಕ್ತ ಕ್ರಮ.  ಕೆಲವು ವೈದ್ಯರು ಈ ರೀತಿ ಔಷಧ ತಯಾರಕರ ಪ್ರಲೋಭನೆಗೆ ಒಳಗಾಗು­ವುದು, ಅಗತ್ಯವಿರದಿದ್ದರೂ ಮೊದಲೇ ಒಡಂಬ­ಡಿ­ಕೆ­ಯಾಗಿರುವ ಔಷಧ ಕಂಪೆನಿಯ ಔಷಧಿ­ಗಳನ್ನೇ ಬರೆದುಕೊಡುವುದು, ಇದರಿಂದ ರೋಗಿ­ಗಳು ತೊಂದರೆಗೆ ಈಡಾಗುತ್ತಿರುವುದು ಎಲ್ಲ­ರಿಗೂ ತಿಳಿದಿರುವ ವಿಷಯವೇ ಆಗಿದೆ.

‘ವೈದ್ಯೋ ನಾರಾಯಣೋ ಹರಿ’ ಎಂಬ ಪಾರಂಪರಿಕ ನಂಬಿಕೆಗೆ ಇಂತಹ ಕೆಲವು ವೈದ್ಯರು ದ್ರೋಹ ಬಗೆಯುತ್ತಿರುವುದು ಹೊಸದೇನಲ್ಲ. ವೈದ್ಯರು ಮತ್ತು ಔಷಧ ತಯಾರಕರ ನಡುವಿನ ಅಪವಿತ್ರ ಮೈತ್ರಿಯ ವಿರುದ್ಧ ದೂರು ಸಲ್ಲಿಸಿದ ಮತ್ತು ಅದರಲ್ಲಿ ಯಶಸ್ವಿಯಾದ ‘ಸ್ವಾಸ್ಥ್ಯ ಅಧಿಕಾರ ಮಂಚ್’ ಸೇವಾ ಸಂಸ್ಥೆ ಕಾರ್ಯ ಅಭಿನಂದ­ನಾರ್ಹ. ಹಾಗೆಂದು ಎಲ್ಲ ವೈದ್ಯರನ್ನೂ ಈ ಪಟ್ಟಿಗೆ ಸೇರಿಸುವುದು ಖಂಡಿತ ಸೂಕ್ತವಲ್ಲ.

ಮಾನ­ವೀಯ ತುಡಿತ, ಸೇವಾ ಮನೋಭಾವ­ಗಳನ್ನು ಹೊಂದಿದ ಅನೇಕ ವೈದ್ಯರು ಹಗಲಿ­ರುಳೂ ರೋಗಿಗಳ ಸೇವೆಗೆ  ತೊಡಗಿಸಿ­ಕೊಂಡಿ­ರುವುದು ಅಷ್ಟೇ ಸತ್ಯ. ಕೆಲವೇ ಕೆಲವು ವೈದ್ಯ­ರಿಂದ  ಇಡೀ ವೈದ್ಯ ವೃತ್ತಿಯ ಘನತೆಗೆ ಕುಂದು ಬರುತ್ತಿದೆ. ಜನಸಾಮಾನ್ಯರು ವೈದ್ಯಕೀಯ ಕ್ಷೇತ್ರ­ವನ್ನು ಸಂಶಯ ದೃಷ್ಟಿಯಿಂದ ನೋಡು­ವಂತಾ­ಗಿದೆ.   ಪ್ರಜ್ಞಾವಂತ ವೈದ್ಯ ಸಮೂಹ ಆತ್ಮಾವ­ಲೋಕನ ಮಾಡಿಕೊಳ್ಳಬೇಕಿದೆ.
–ಮಹಾದೇವ ಬಸರಕೋಡ ಅಮೀನಗಡ, ಹುನಗುಂದ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.