‘ಮಕ್ಕಳಿಲ್ಲದೆ, ವೃದ್ಧಾಪ್ಯದಲ್ಲಿ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಮುಂಬೈನ ವೃದ್ಧ ದಂಪತಿ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿರುವುದು (ಪ್ರ.ವಾ., ಜ. 12) ನಮ್ಮ ಸಮಾಜದಲ್ಲಿ ವೃದ್ಧರ ಸ್ಥಿತಿ ಹೇಗಿದೆ ಎಂಬುದರ ಸತ್ಯದರ್ಶನ ಮಾಡಿಸುತ್ತದೆ.
ಈ ವಯೋವೃದ್ಧ ದಂಪತಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಅವರು ನಕಾರಾತ್ಮಕ ಚಿಂತನೆಗಳನ್ನು ಹೊಂದುವ ಅಗತ್ಯ ಇರಲಿಲ್ಲ. ತಮ್ಮ ಸೇವೆಗಾಗಿ ಆಯಾಗಳನ್ನು ನೇಮಕ ಮಾಡಿಕೊಂಡು ಅಥವಾ ವೃದ್ಧಾಶ್ರಮ ಸೇರಿಕೊಂಡು, ಅಲ್ಲಿನ ವಯೋ ವೃದ್ಧರೊಂದಿಗೆ ಬೆರೆತು ಉಳಿದ ಜೀವನವನ್ನು ಕಳೆಯಬಹುದು. ದಿನದ ಒಂದಿಷ್ಟು ಸಮಯವನ್ನು ಹೊರಗೆ ಕಳೆಯುವುದು, ಆನಾಥ ಮಕ್ಕಳನ್ನು ಭೇಟಿ
ಮಾಡಿ, ಅವರಿಗೆ ಸಹಾಯ ಮಾಡುವುದು, ಅಧ್ಯಾತ್ಮ ಚಿಂತನೆ, ಪ್ರವಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಸುಂದರಗೊಳಿಸ ಬಹುದು.
ಹಿರಿಯರು ಸಮಾಜಕ್ಕೆ, ಯುವಕರಿಗೆ ಮಾರ್ಗದರ್ಶಕರಾಗಿರಬೇಕು. ‘ಮಕ್ಕಳಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ’ ಎಂಬ ಅವರ ಹೇಳಿಕೆಯಿಂದ ಸಮಾಜದ ಸ್ವಾಸ್ಥ್ಯ ಮತ್ತಷ್ಟು ಕೆಡುತ್ತದೆ. ಮಕ್ಕಳಿಲ್ಲದ ಇತರ ವಯೋವೃದ್ಧರ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಈ ವೃದ್ಧ ದಂಪತಿ ನಕಾರಾತ್ಮಕ ಸ್ಥಿತಿಯಿಂದ ಹೊರಬಂದು, ಬದುಕನ್ನು ಪುನಃ ಕಟ್ಟಿಕೊಳ್ಳಲಿ.
-ಪ.ಚಂದ್ರಕುಮಾರ, ಗೌನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.