ADVERTISEMENT

ನಾಯಕರ ಗೋಳು ಬೇಡ

ಕೆ.ಎಸ್‌.ನಾಗರಾಜ
Published 11 ಜುಲೈ 2018, 15:40 IST
Last Updated 11 ಜುಲೈ 2018, 15:40 IST

ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳಿಂದ ಜನ ಬಯಸುವುದು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದೇ ವಿನಾ ಜನಪ್ರತಿನಿಧಿಗಳು ಅವರದೇ ಗೋಳು ಹೇಳಿಕೊಳ್ಳಲಿ ಎಂಬುದನ್ನು ಅಲ್ಲ. ದುರಂತವೆಂದರೆ ಈಗ ನಡೆಯುತ್ತಿರುವ ಕಲಾಪಗಳಲ್ಲಿ ನಾಯಕರ ಗೋಳಾಟವೇ ಕೇಳಿಸುತ್ತಿದೆ. ಅಧಿಕಾರ ಕಳೆದುಕೊಂಡವರ ಕಣ್ಣೀರಧಾರೆ ಹರಿಯುತ್ತಿದೆ. ಅಧಿಕಾರದಲ್ಲಿರುವವರ ಸಮರ್ಥನೆ ಮೊಳಗುತ್ತಿದೆ. ಈ ಮೇಲಾಟದಲ್ಲಿ ಸದನದ ಸಮಯ ಹಾಳಾಗುತ್ತಿದೆ.

ಮಾಜಿ ಮುಖ್ಯಮಂತ್ರಿಯೊಬ್ಬರು ತಮಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕಾಗಿ ಹತ್ತು ವರ್ಷಗಳ ಹಿಂದಿನ ರಾಜಕೀಯ ಘಟನೆಗಳನ್ನು ಇಂದಿಗೂ ಚರ್ಚಿಸುತ್ತಾ ಹತಾಶೆ ಹೊರಹಾಕಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಇವರು ಅವಕಾಶವಂಚಿತವಾದಾಗ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.

ಸದನದ ಕಲಾಪಕ್ಕೆ ನಾಗರಿಕರ ತೆರಿಗೆಯ ಹಣ ಖರ್ಚಾಗುತ್ತದೆ. ನಾಯಕರು ಇದನ್ನು ಅರಿಯಬೇಕು. ವೈಯಕ್ತಿಕ ಸಮಸ್ಯೆಗಳಿದ್ದರೆ ಪತ್ರಿಕಾಗೋಷ್ಠಿ ಕರೆದು ಹೇಳಿಕೊಳ್ಳಲಿ. ಸದನದಲ್ಲಿ ಚರ್ಚೆಯಾಗಬೇಕಾದದ್ದು ರಾಜನೀತಿಗಳೇ ಹೊರತು ಚಿಲ್ಲರೆ ರಾಜಕಾರಣವಲ್ಲ.

ADVERTISEMENT

– ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.