ADVERTISEMENT

ಗ್ರಾಮಸಭೆಗಳಿಗೆ ಹೊಸ ಶಕ್ತಿ ಸಾಧ್ಯವೇ?

ಮತ್ತಿಹಳ್ಳಿ ಮದನ ಮೋಹನ
Published 30 ನವೆಂಬರ್ 2014, 19:30 IST
Last Updated 30 ನವೆಂಬರ್ 2014, 19:30 IST

ಕರ್ನಾಟಕದಲ್ಲಿ ೧೯೮೭ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಾಗಲೇ ಗ್ರಾಮಸಭೆಗಳ ಪರಿಕಲ್ಪನೆಯೂ ಕಾರ್ಯರೂಪಕ್ಕೆ ಬಂತು. ಗ್ರಾಮಗಳಲ್ಲಿರುವ ಎಲ್ಲರೂ ತಮಗೆ ಬೇಕಾದುದನ್ನು ಹೇಳಿ ಅದನ್ನು ಮಂಡಲ ಪಂಚಾಯಿತಿಗಳ ಮೂಲಕ ಪರಿಹರಿಸಿಕೊಳ್ಳುವ ಅವಕಾಶ ಜನರನ್ನು ಪುಳಕಿತರನ್ನಾಗಿ ಮಾಡಿತು. ಗ್ರಾಮ ಸಭೆಗಳ ಮೂಲಕ ಅವರು ಮಂಡಿಸುವ ಬೇಡಿಕೆಯ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಿತು. 

ಅದರೆ  ಜನರ ಬೇಡಿಕೆಗಳನ್ನು ಕಾರ್ಯಗೊಳಿಸುವ ವ್ಯವಸ್ಥೆಯ ಅಭಾವವು ನಿರಾಸೆ ತಂದುದರಿಂದ ಗ್ರಾಮಸಭೆಗಳು ತಮ್ಮ ಆಕರ್ಷಣೆಯನ್ನು ಕಳೆದುಕೊಂಡವು.  ಮಂಡಲ ಪಂಚಾಯಿತಿಗಳ ಬದಲು ಗ್ರಾಮಕ್ಕೊಂದು ಪಂಚಾಯಿತಿ ಇರುವ ಮೂರು ಹಂತದ ಪದ್ಧತಿ  ಜಾರಿ ಬಂದರೂ ಪ್ರಯೋಜನ­ವಾಗ­ಲಿಲ್ಲ. ಗ್ರಾಮ ಸಭೆಗಳಿಗೆ ಹೆಚ್ಚಿನ ಅಧಿಕಾರ ಕೊಡುವ ಇನ್ನೊಂದು ಹೊಸ ಕಾನೂನನ್ನು  ೨೦೦೩ರಲ್ಲಿ ತಂದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಗಳಲ್ಲಿ  ಭಾಗವಹಿಸುವಂತೆ ವಾರ್ಡ್ ಸಭೆಗಳನ್ನು ಏರ್ಪಡಿಸುವ ವ್ಯವಸ್ಥೆ ಜಾರಿಗೆ ತಂದರೂ.  ಪರಿಸ್ಥಿತಿಯಲ್ಲಿ ಯಾವ ಸುಧಾರಣೆಯೂ ಬರಲಿಲ್ಲ.

ಗ್ರಾಮ ಸಭೆಗಳು ಕ್ರಿಯಾಶೀಲ ಆಗ­ದಿರು­ವುದರಿಂದಾದ ದುಷ್ಪರಿಣಾಮಗಳು  ಹಲವಾರು.  ಅವುಗಳಿಗೆ ದತ್ತವಾದ ಅಧಿಕಾರವನ್ನು ಬೇರೆಯವರು ಚಲಾಯಿಸುತ್ತಿದ್ದಾರೆ. ಅರ್ಥಾತ್ ಶಾಸಕರು, ಸ್ಥಳೀಯ ಪ್ರಭಾವಿ ರಾಜಕಾರಣಿಗಳು, ಪಂಚಾಯಿತಿ ಸದಸ್ಯರು ಮತ್ತು ಅಧಿಕಾರ ಶಾಹಿ ಸೇರಿರುವ ವರ್ಗ ಈಗ  ಅಧಿಕಾರ ಚಲಾಯಿಸುತ್ತಿದೆ. ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳು ನಿರ್ವಹಿಸಬೇಕಾದ ಮಹತ್ವದ ಜವಾಬ್ದಾರಿಯೆಂದರೆ ವಸತಿ ಮತ್ತು ನಿವೇಶನಗಳನ್ನು ಪಡೆಯಲು ಅರ್ಹರಾದ ಫಲಾನುಭವಿಗಳನ್ನು ಗುರುತಿಸುವುದು. ಇದು ಬರೀ ಕಾಗದದ ಮೇಲೆ ಅಷ್ಟೇ ಇದೆ. ಗ್ರಾಮ ಸಭೆಗಳು ಆಗುವುದೇ ವಿರಳ. ಸಭೆ ನಡೆದಾಗ ಹಾಜರಾಗುವವರ ಸಂಖ್ಯೆ  ಬಹಳ ಕಡಿಮೆ. ಅಧಿಕಾರಿಗಳು ಬಂದರೂ, ಬರದಿದ್ದರೂ ಕೇಳುವವರಿಲ್ಲ. ಆದರೂ ವಿಷಯಗಳು ಪಾಸಾಗುತ್ತವೆ. ನಿರ್ಣಯಗಳು ಆಗುತ್ತವೆ.

ಈ ಪರಿಸ್ಥಿತಿಯಲ್ಲಿ  ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಕೇಂದ್ರ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವೊಂದು ದುರಂತ. ಕೇಂದ್ರ ಸರ್ಕಾರದಿಂದ ಹಣವು ಹೊಳೆಯಂತೆ ಹರಿದು ಬರುತ್ತಿದ್ದರೂ,  ಅದರ ನಿರ್ವಹಣೆ ಮಾಡುತ್ತಿರುವವರು ಅಧಿಕಾರಿಗಳೇ. ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಹೋಗಬೇಕಾದ ಹಣ ಜಿಲ್ಲಾ ಪಂಚಾಯಿತಿಗಳ ಮೂಲಕ ಬಂದು ಗೊಂದಲವಾಗಿದೆ. ಈ ಯೋಜನೆಯ ಅನ್ವಯ ಜನಕ್ಕೆ ಬೇಕಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದೂ ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಸಭೆಗಳು ಯಾವ ಕಾಮಗಾರಿ ಎಂಬುದನ್ನು ನಿರ್ಧರಿಸಬೇಕಾಗಿತ್ತು. ಹಾಗಾಗದೆ ಹಣ ದುರುಪಯೋಗದ ಪ್ರಕರಣಗಳು ಹೆಚ್ಚುತ್ತಿವೆ. ಪ್ರಭಾವಿ ಧುರೀಣರು ಅಧ್ಯಕ್ಷರನ್ನು ಕೂಡಿಕೊಂಡು ಯಾರ ಭಯವೂ ಇಲ್ಲದೆ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಈಗಿರುವ ಕಾನೂನಿನಲ್ಲಿ  ಗ್ರಾಮಗಳಲ್ಲಿರುವ ಪ್ರತಿಯೊಂದು ವಾರ್ಡಿಗೂ ಒಂದು ವಾರ್ಡ್ ಸಮಿತಿ ರಚಿ­­ಸ­­­ಬೇಕೆಂದಿದೆ. ಈ ತತ್ವವನ್ನು, ವಾರ್ಡ್ ಪ್ರದೇಶದ ಹೊರಗಿರುವ ತಾಂಡ, ಹಾಡಿ ಇತ್ಯಾದಿಗಳಲ್ಲಿ ವಾಸಿ­ಸು­ತ್ತಿರುವವರ ಸಲುವಾಗಿ  ಜನವಸತಿ ಸಮಿತಿ ಮಾಡಬೇಕೆಂದು ರಮೇಶ್‌ಕುಮಾರ್ ಸಮಿತಿ ಸೂಚಿ­ಸಿದೆ. ವಾರ್ಡ್ ಸಮಿತಿಗೆ ಇರುವ ಅಧಿಕಾರವೇ ಜನವಸತಿ ಸಮಿತಿಗಳಿರಬೇಕು.  ಇಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳು , ನಿರ್ಧಾರಗಳನ್ನು ಗ್ರಾಮ ಸಭೆಗಳು ಎತ್ತಿ ಹಿಡಿಯಬೇಕು.

ಇವನ್ನು ಗ್ರಾಮ ಪಂಚಾ­ಯಿತಿಗಳು ಅನುಷ್ಠಾನ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದೊಂದು ಮಹತ್ವದ ಹೆಜ್ಜೆ.
ರಮೇಶ್‌ಕುಮಾರ್ ಸಮಿತಿಯ ಶಿಫಾರಸಿನಲ್ಲಿ ಹೇಳಿದಂತೆ ಕಾನೂನಿಗೆ ತಿದ್ದುಪಡಿಯಾದರೆ, ಜನವಸತಿ ಮತ್ತು ವಾರ್ಡ್  ಸಭೆಗಳು ಗ್ರಾಮಸಭೆಗಳನ್ನು ನಿಯಂತ್ರಿಸುತ್ತವೆ. ಅಂದರೆ ಗ್ರಾಮ ಪಂಚಾಯಿತಿಯ ಮೇಲೆ ಗ್ರಾಮಸಭೆಗಳಿಗೆ ನಿಯಂತ್ರಣವಿರುತ್ತದೆ. ಗ್ರಾಮ ಪಂಚಾಯಿತಿಯೊಂದು ಮಾಡುವ ಮತ್ತು ಮಾಡಲು ಉದ್ದೇಶಿಸಿರುವ ಎಲ್ಲಾ ಕೆಲಸಗಳ ವಿವರಗಳನ್ನು ಗ್ರಾಮ ಸಭೆಗಳಿಗೆ ನೀಡುವುದು ಕಡ್ಡಾಯ. ಇದರಿಂದ ಒಂದು ಮಟ್ಟದ ಉತ್ತರದಾಯಿತ್ವವನ್ನು ಸಮುದಾಯವೇ ಖಾತರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರತೀ ಡಿಸೆಂಬರ್ ತಿಂಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಸಂಘಟಿಸಿ ವಾರ್ಷಿಕ ಬಜೆಟ್‌ನಲ್ಲಿ ನೀಡಿದ ಹಣ, ಯೋಜನಾ ಅಂದಾಜುಗಳ ವಿವರ, ಹಿಂದಿನ  ವರ್ಷದ ಲೆಕ್ಕ ಪತ್ರ, ಆಡಿಟ್ ವಿವರ,  ಪಂಚಾಯತ್‌ ಜಮಾಬಂದಿ ವರದಿ ಮತ್ತು ಅದರ ಮೇಲೆ ತೆಗೆದುಕೊಂಡ ಕ್ರಮಗಳ ಬಗೆಗೆ ಚರ್ಚಿಸಬೇಕು. ಹಾಗೆಯೇ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ  ನಡೆಸುವ ಸಭೆಗಳಲ್ಲಿ ಯೋಜನೆ ಮತ್ತು ಪಂಚಾಯಿತಿಯ ಆರ್ಥಿಕ ಪರಿಸ್ಥಿತಿಯ ಕುರಿತು ಚರ್ಚಿಸಬೇಕು.

ಇವೆಲ್ಲವೂ ಪಂಚಾಯಿತಿಯ ಅಧ್ಯಕ್ಷರ ಕರ್ತವ್ಯ ಗ್ರಾಮ ಪಂಚಾಯಿತಿಗಳು ಪ್ರತಿವರ್ಷ ಸಾಮಾಜಿಕ ಆರ್ಥಿಕ ವರದಿ ಅಂದರೆ ಜಾತಿವಾರು ಜನಸಂಖ್ಯೆ, ಬೆಳೆ ಮತ್ತು ಪಶು ಸಂಪತ್ತಿನ, ನಿರುದ್ಯೋಗಿ ತರುಣರ, ಮತ್ತು ಬಡತನದ ರೇಖೆಯ ಕೆಳಗಿರುವ ಜನರ ಗಣತಿಯನ್ನು ಮಾಡಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಅಭಿವೃದ್ಧಿಗಾಗಿ ಜನರ ಬೇಕು ಬೇಡಗಳನ್ನು ಕಲೆಹಾಕುವ, ಗ್ರಾಮ ಸಭೆಗಳಿಂದ ಬರುವ ವರದಿಗಳ ಆಧಾರದ ಮೇಲೆ ವಾರ್ಷಿಕ ಅಭಿವೃದ್ಧಿ ಯೋಜನೆ ಮತ್ತು ದೂರದೃಷ್ಟಿ ಯೋಜನೆಯನ್ನು ತಯಾರಿಸಿ ಗ್ರಾಮ ಸಭೆಗಳ ಮುಂದಿಡುವದನ್ನು ಕಡ್ಡಾಯ ಮಾಡಲಾಗಿದೆ.  ಮತ್ತು ಇವುಗಳೆಲ್ಲವನ್ನೂ ಒಟ್ಟು ಗೂಡಿಸಿ ತಾಲ್ಲೂಕು ಮತ್ತು ಜಿಲ್ಲಾ ಯೋಜನಾ ಸಮಿತಿಗಳಿಗೆ ತಲುಪಿಸಬೇಕು. ಇವೆಲ್ಲವೂ ಬಹಳ ಅಮೂಲ್ಯವಾದ ಮತ್ತು ಅಗತ್ಯವಾದ ಸಲಹೆಗಳು. ಈಗಿರುವ ದೊಡ್ಡ ಸಮಸ್ಯೆಯೆಂದರೆ ಇಂತಹ ಬದಲಾವಣೆಗಳಿಗೆ ಸರ್ಕಾರ ಸಿದ್ಧವಿದೆಯೇ ಎಂಬುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.