ನವದೆಹಲಿ: ‘2020ರ ಕಾಮನ್ವೆಲ್ತ್ ಕ್ರೀಡಾಕೂಟದ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸುವುದಿಲ್ಲ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಸಿ) ಅಧ್ಯಕ್ಷ ಎನ್. ರಾಮಚಂದ್ರನ್ ತಿಳಿಸಿದ್ದಾರೆ.
‘ಕೂಟದ ಆತಿಥ್ಯ ಪಡೆಯಲು ಈಗಾಗಲೇ ಸಾಕಷ್ಟು ದೇಶಗಳ ನಡುವೆ ಪೈಪೋಟಿ ಶುರುವಾಗಿದೆ. ಜೊತೆಗೆ ಸಮಯವೂ ಮೀರಿದೆ.
ದಕ್ಷಿಣ ಆಫ್ರಿಕಾ , ಆತಿಥ್ಯದಿಂದ ಹಿಂದೆ ಸರಿದಿರುವುದಾಗಿ ಹೇಳಿದೆಯಾ ದರೂ ಅದು ಇನ್ನೂ ಅಂತಿಮವಾಗಿಲ್ಲ. ಕಾಮನ್ವೆಲ್ತ್ ಕ್ರೀಡಾ ಕೂಟದ ಸಮಿತಿಯು ದಕ್ಷಿಣ ಆಫ್ರಿಕಾದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಆ ದೇಶದ ಮನವೊಲಿಸುವ ಪ್ರಯತ್ನ ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಇಂಗ್ಲೆಂಡ್ ಕೂಡ ಆತಿಥ್ಯ ಪಡೆಯಲು ಮುಂದೆ ಬಂದಿದ್ದು ಲಂಡನ್, ಮ್ಯಾಂಚೆಸ್ಟರ್ ಮತ್ತು ಬರ್ಮಿಂಗ್ ಹ್ಯಾಮ್ನಲ್ಲಿ ಕೂಟ ಆಯೋಜಿಸಲು ಸಿದ್ಧವಿರುವುದಾಗಿ ಹೇಳಿದೆ. ಈ ಹಂತದಲ್ಲಿ ನಾವು ಬಿಡ್ ಸಲ್ಲಿಸುವುದು ಸರಿ ಅನಿಸುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಸ್ಯಾಫ್ ಕ್ರೀಡಾಕೂಟವನ್ನು ನಾವು ಕೇವಲ 90 ದಿನಗಳಲ್ಲಿ ಆಯೋಜಿಸಿ ಯಶಸ್ಸು ಗಳಿಸಿದ್ದೆವು.
ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕೂಟಗಳನ್ನು ನಡೆಸುವ ಆಲೋಚನೆ ಇದೆ’ ಎಂದೂ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.