ಬ್ಯಾಂಬೊಲಿಮ್: ಗೋವಾ –ಕೇರಳ ಹಾಗೂ ಪಶ್ಚಿಮ ಬಂಗಾಳ– ಮಿಜೋರಾಂ ತಂಡಗಳು ಗುರುವಾರ ನಡೆಯುವ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ನಲ್ಲಿ ಪರಸ್ಪರ ಪೈಪೋಟಿ ನಡೆಸಲಿವೆ.
ಗೋವಾ ತಂಡ 2009ರಲ್ಲಿ ಸಂತೋಷ್ ಟ್ರೋಫಿ ಎತ್ತಿಹಿಡಿದಿತ್ತು. ಈ ಬಾರಿ ತವರಿನಲ್ಲಿ ನಡೆಯುವ ಟೂರ್ನಿಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಪ್ರತೀ ಪಂದ್ಯದಲ್ಲೂ ನೂತನ ತಂತ್ರ ಗಳೊಂದಿಗೆ ಕಣಕ್ಕಿಳಿಯುವ ಮೂಲಕ ಗೋವಾ ಟೂರ್ನಿಯ ಆರಂಭದಿಂದಲೂ ಗಮನಸೆಳೆದಿತ್ತು.
ಈ ತಂಡ ಕ್ವಾರ್ಟರ್ಫೈನಲ್ನಲ್ಲಿ ಸರ್ವಿಸಸ್ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿದೆ. ಹಿಂದಿನ ಪಂದ್ಯದಲ್ಲಿ ಗಾಯ ಗೊಂಡಿದ್ದ ಗೋವಾ ತಂಡದ ಲೆನಿ ಪೆರೇರಾ ಮತ್ತು ಫ್ರ್ಯಾನ್ಸಿಸ್ ಫರ್ನಾಂಡಿಸ್ ಸೆಮಿಫೈನಲ್ನಲ್ಲಿ ಆಡುವುದು ಅನುಮಾನ ಎನಿಸಿದೆ. 2012ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಕೇರಳ ತಂಡ ಫೈನಲ್ ತಲುಪಿತ್ತು.
ಸರ್ವಿಸಸ್ ಎದುರು ಸೋಲು ಕಂಡಿದ್ದರಿಂದ ಪ್ರಶಸ್ತಿ ಕೈತಪ್ಪಿತ್ತು. ಈ ಬಾರಿ ಪಿ.ಉಸ್ಮಾನ್ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಯಶಸ್ವಿಯಾಗಿ ಪ್ರಶಸ್ತಿ ಸುತ್ತು ತಲುಪುವ ಉತ್ಸಾಹದಲ್ಲಿದೆ. 31 ಬಾರಿ ಸಂತೋಷ್ ಟ್ರೋಫಿ ಎತ್ತಿಹಿಡಿದಿರುವ ಇತಿಹಾಸ ಹೊಂದಿರುವ ಬಂಗಾಳ ತಂಡ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮಿಜೋರಾಂ ಎದುರು ಆಡಲಿದೆ.
ಎರಡು ದಿನದ ಹಿಂದೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮಿಜೋರಾಂ ತಂಡ ಸರ್ವಿಸಸ್ ಎದುರು 5–1 ಗೋಲುಗಳಲ್ಲಿ ಜಯ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.