ಕಲಬುರ್ಗಿ: ಐದನೇ ಶ್ರೇಯಾಂಕದ ಆಟಗಾರ್ತಿ ಕರ್ನಾಟಕದ ವಿಜೇತಾ ಹರೀಶ್ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನಲ್ಲಿ ವಿಜೇತಾ ಹರೀಶ್ 21–11, 21–19 ರಲ್ಲಿ 14ನೇ ಶ್ರೇಯಾಂಕದ ತಮಿಳುನಾಡಿನ ಎಸ್.ಪ್ರವೀಣಾ ಅವರಿಗೆ ಸೋಲುಣಿಸಿದರು. ಸುಮಾರು 22 ನಿಮಿಷ ಈ ಹಣಾಹಣಿ ನಡೆಯಿತು.
ಅದೇ ರೀತಿ 13 ವರ್ಷದೊಳಗಿನ ಬಾಲಕರ ಸಿಂಗಲ್ಸ್ನಲ್ಲಿ ಸಾತ್ವಿಕ್ ಶಂಕರ್, ತುಷಾರ್ ಸುವೀರ್, 13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನಲ್ಲಿ ಎಸ್.ಕಾರ್ಣಿಕಾಶ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
15ನೇ ಶ್ರೇಯಾಂಕದ ತುಷಾರ್ ಸುವೀರ್ 21–18, 21–18ರಲ್ಲಿ ಅಸ್ಸಾಂನ ಎನ್.ಯೋಹೇನ್ಬಾ ಸಿಂಗ್ ಅವರನ್ನು ಮಣಿಸಿದರು.
ಸಾತ್ವಿಕ್ ಶಂಕರ್ 14–21, 21–19, 21–14ರಲ್ಲಿ 2ನೇ ಶ್ರೇಯಾಂಕದ ಪ್ರಜ್ವಲ್ ಸೋನ್ವಾನೆ ಅವರನ್ನು ಸೋಲಿಸಿದರು.
ಎಸ್.ಕಾರ್ಣಿಕಾಶ್ರೀ 21–15, 21–19 ರಲ್ಲಿ ಉತ್ತರ ಪ್ರದೇಶದ ಅನುಷ್ಕಾ ಜಯಪಾಲ್ ಎದುರು ಗೆಲುವು ಸಾಧಿಸಿದರು.
13 ವರ್ಷದೊಳಗಿನ ಬಾಲಕಿಯರ ಡಬಲ್ಸ್ನಲ್ಲಿ ಕರ್ನಾಟಕದ ಎಸ್.ಕಾರ್ಣಿಕಾಶ್ರೀ, ಉತ್ತರ ಪ್ರದೇಶದ ಮಾನಸಾ ರಾವತ್ ಜೋಡಿ 21–9, 21–7ರಲ್ಲಿ ತಮಿಳುನಾಡಿನ ಅನ್ಬು ಜೆನೆತಾ, ಆರ್.ಮೌಷಿಕಾ ಎದುರು ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮಹಾರಾಷ್ಟ್ರದ ಹ್ರಿಶ್ಯಾ ದುಬೆ ಎದುರು 21–16, 19–21, 21–18ರಲ್ಲಿ ರಾಜ್ಯದ ರಿತು ಷಾ ಸೋತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.