ಮಂಗಳೂರು: ಮೂಡುಬಿದಿರೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಭಾನುವಾರದಿಂದ 70ನೇ ರಾಷ್ಟ್ರಮಟ್ಟದ ಪುರುಷ ಹಾಗೂ 33ನೇ ಮಹಿಳಾ ಸೀನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ ನಡೆಯಲಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದಿದ್ದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸಾಯಿಕೋಮ್ ಮೀರಾಬಾಯಿ ಚಾನು ಇಲ್ಲಿ ಸ್ಪರ್ಧಿಸಲಿದ್ದಾರೆ.
ಕರ್ನಾಟಕ ರಾಜ್ಯ ವೇಟ್ಲಿಫ್ಟಿಂಗ್ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೇಟ್ಲಿಫ್ಟಿಂಗ್ ಸಂಸ್ಥೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ರಾಜ್ಯದಲ್ಲಿ ಈ ಟೂರ್ನಿ ನಡೆಯುತ್ತಿರುವುದು ಇದು ಎರಡನೇ ಬಾರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಸ್ಪರ್ಧೆ ನಡೆಯುತ್ತಿರುವುದು ವೇಟ್ಲಿಫ್ಟರ್ಗಳಲ್ಲಿ ಹುಮ್ಮಸ್ಸು ತಂದಿದೆ. 40ಕ್ಕೂ ಹೆಚ್ಚು ಸ್ಫರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರತ್ಯೇಕ ಎಂಟು ಹಂತಗಳಲ್ಲಿ ಸ್ಪರ್ಧೆ ನಡೆಯಲಿವೆ. 77 ಕೆ.ಜಿ ವಿಭಾಗದಲ್ಲಿ ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿರುವ ತಮಿಳುನಾಡಿನ ಸತೀಶ್ ಶಿವಲಿಂಗಂ ರೈಲ್ವೆ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅಖಿಲ ಭಾರತ ಚಾಂಪಿಯನ್ ಆಗಿರುವ ಮಣಿಪುರದ ಸಾಯಿಕೋಮ್ ಮೀರಾಬಾಯಿಚಾನು 48 ಕೆ.ಜಿ ವಿಭಾಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುದೀಪ್ ಸಿಂಗ್, ಪ್ರದೀಪ್ ಸಿಂಗ್, ವಿಕಾಸ್ ಠಾಕೂರ್, ಆರ್.ವಿ. ರಾಹುಲ್, ದೀಪಕ್ ಲಾಥಕರ್, ಸಂಜೀತಾ, ಪೂನಮ್ಮ, ಕರ್ನಾಟಕ ತಂಡದ ಥಸ್ನಾ, ಕಾಂಚನಾ, ಆಳ್ವಾಸ್ನ ನವೀನ್ಚಂದ್ರ, ಗುರುರಾಜ್ ಸೇರಿದಂತೆ ಘಟಾನುಘಟಿ ವೇಟ್ಲಿಫ್ಟರ್ಗಳು ಸ್ಪರ್ಧೆ ಒಡ್ಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.