ADVERTISEMENT

ಭಾರತ ತಂಡ ಬೇಗನೇ ಬರಬೇಕಿತ್ತು: ಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ನೆಲಕ್ಕೆ ಭಾರತ ಕ್ರಿಕೆಟ್‌ ತಂಡ ಸ್ವಲ್ಪ ಬೇಗನೇ ಬಂದಿದ್ದರೆ ಉತ್ತಮ ಆತಿಥೇಯರಿಗೆ ಉತ್ತಮ ಪೈಪೋಟಿ ನೀಡಬಹುದಾಗಿತ್ತು ಎಂದು ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

‘ವಿದೇಶಿ ನೆಲದಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಆಟಗಾರರಿಗೆ ಸಮಯ ಬೇಕಾಗುತ್ತದೆ. ಭಾರತ ತಂಡ ಇಲ್ಲಿಗೆ ಹೊಂದಿಕೊಳ್ಳದೇ ಇರುವುದೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲಲು ಕಾರಣ’ ಎಂದು ಹೇಳಿದರು.

‘ಕಾರಣ ಏನೇ ಇರಲಿ, ಸೋಲು ಸೋಲೇ. ಎರಡೂ ತಂಡಗಳು ಆಡಿದ್ದೇ ಒಂದೇ ಪಿಚ್‌ನಲ್ಲಿ. ಆದ್ದರಿಂದ ಉತ್ತಮ ಪೈಪೋಟಿ ನೀಡಬೇಕಾಗಿತ್ತು. ಆದ್ದರಿಂದ ಸೋಲಿನಿಂದ ನಿರಾಸೆ ಕಂಡಿದ್ದೇವೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಿಂಚಿದರೆ ಮೂರನೇ ಟೆಸ್ಟ್‌ನಲ್ಲಿ ತಂಡ ಗೆಲ್ಲುವ ಅವಕಾಶವಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಮೂರನೇ ಪಂದ್ಯ ಇದೇ 24ರಿಂದ ಇಲ್ಲಿ ನಡೆಯಲಿದೆ.

ADVERTISEMENT

ರಹಾನೆ ಅಭ್ಯಾಸ
ಮೊದಲ ಎರಡು ಪಂದ್ಯಗಳಲ್ಲಿ ಬೆಂಚು ಕಾದ ಅಜಿಂಕ್ಯ ರಹಾನೆ ಇಲ್ಲಿ ಅಭ್ಯಾಸ ನಡೆಸಿದ್ದಾರೆ. ಮೂರನೇ ಪಂದ್ಯದಲ್ಲಿ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ನಿಚ್ಚಳವಾಗಿದೆ.

ಮೂರನೇ ಪಂದ್ಯಕ್ಕೆ ಇಲ್ಲಿನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿಯಾಗುವ ಪಿಚ್‌ ಸಿದ್ಧಗೊಳಿಸಲಾಗಿದೆ.

ಸೆಂಚೂರಿಯನ್‌ನಲ್ಲಿ ಹುಲ್ಲಿನ ಹೊದಿಕೆ ಇಲ್ಲದ ಪಿಚ್‌ ಸಿದ್ಧಗೊಳಿಸಲಾಗಿತ್ತು. ಇದಕ್ಕೆ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ತಂಡ ಸುಲಭವಾಗಿ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.