ಚೇಳೂರು: ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿವೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಿವೆ. ಇಂತಹ ಪ್ರಯೋಗಗಳ ನಡುವೆಯೇಇರಗಂಪಲ್ಲಿ ಗ್ರಾಮದ ತಲಾರಿ ನರಸಿಂಹಪ್ಪ ಅನುಪಯುಕ್ತವಾಗಿರುವ ಬೈಸಿಕಲ್ ಚಕ್ರಗಳನ್ನು ಶೇಂಗಾ ಬೆಳೆಯ ನಡುವಿನ ಕಳೆ ತೆಗೆಯಲು ಬಳಸುತ್ತಿದ್ದಾರೆ. ಈ ಮಾದರಿಯ ವಿಧಾನ ಸುತ್ತಲಿನ ರೈತರ ಗಮನ ಸೆಳೆದಿದೆ. ಇದಕ್ಕೆ ಕಡಿಮೆ ಖರ್ಚು ಮತ್ತು ಶ್ರಮ ಆಗುತ್ತದೆ.
ಬಹುತೇಕ ಗ್ರಾಮೀಣ ಭಾಗದಲ್ಲಿ ಭತ್ತದ ಬೆಳೆಯ ಬಳಿಕ ಶೇಂಗಾವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. 90 ರಿಂದ 100 ದಿನದ ವರೆಗೆ ಶೇಂಗಾ ಬೆಳೆ ಇರುತ್ತದೆ. ಹೂ ಬಿಡುವ ಸಂದರ್ಭದಲ್ಲಿ ಗಿಡದ ಬುಡಕ್ಕೆ ಮಣ್ಣು ತುಂಬಿಸಬೇಕಾಗುತ್ತದೆ. ಸಾಮಾನ್ಯವಾಗಿ ರೈತರು ಸಪೂರವಾದ ಕಬ್ಬಿಣದ ಹಾರೆ ಮೂಲಕ ಶೇಂಗಾ ಗುಡಿಸುವ ಸಾಂಪ್ರದಾಯಿಕ ಪದ್ಧದತಿ ಅನುಸರಿಸುತ್ತಿದ್ದರೆ. ಆದರೆ ಈ ಸಮಸ್ಯೆಗೆ ಮುಕ್ತಿನೀಡುವ ಜೂತೆಗೆ ಕ್ಷಿಪ್ರವಾಗಿ ಶೇಂಗಾ ಗುಡಿಸಲು ತಲಾರಿ ನರಸಿಂಹಪ್ಪ ಗುಜರಿ ಸೈಕಲ್ ಚಕ್ರಗಳನ್ನು ಬಳಸಿಕೊಂಡು ಯಶಸ್ವಿಯಾಗಿ ದ್ದಾರೆ
ಚಕ್ರದ ಹಿಂಬದಿಗೆ ಹ್ಯಾಂಡಲ್ ಅಳವಡಿಸಿ ಕೆಳಭಾಗದಲ್ಲಿ ಚಿಕ್ಕ ಕಬ್ಬಿಣದ ಹಾರೆಯನ್ನು ಜೋಡಿಸಿದ್ದಾರೆ. ಹೀಗೆ ಯಂತ್ರ ಸಿದ್ಧ ಮಾಡಿದ್ದಾರೆ. ಇದರ ರಚನೆಗೆ ₹ 300 ರಿಂದ 400 ಖರ್ಚು ತಗಲುತ್ತದೆ.
ಕೃಷಿಕರಿಗೆ ಕೈಗೆಟುಕದ ಸಾವಿರಾರು ರೂಪಾಯಿ ಬೆಲೆಯ ಯಂತ್ರಗಳ ನಡುವೆ ಈ ಯಂತ್ರ ಸುಲಭದಲ್ಲಿ ರಚಿಸಬಹುದು. ಕಡಿಮೆ ಶ್ರಮ ಹಾಗೂ ಅಧಿಕ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನರಸಿಂಹಪ್ಪ.
ರೈತರಿಗೆ ಅನುಕೂಲ
ಇಂತಹ ಮಾದರಿಗಳು ರೈತರಿಗೆ ಅನುಕೂಲವಾಗುತ್ತವೆ. ನನಗೆ ಈ ಯಂತ್ರದಿಂದ ಹೆಚ್ಚಿನ ಸಹಾಯ ಆಗುತ್ತಿದೆ. ಖರ್ಚು ಕಡಿಮೆ ಮತ್ತು ಶ್ರಮ ಸಹ ಇರುವುದಿಲ್ಲ ಎನ್ನುವರು ನರಸಿಂಹಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.