ADVERTISEMENT

ಇಂದಿನಿಂದ ದೃಶ್ಯ ನಾಟಕೋತ್ಸವ

drushya natakotsava

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:45 IST
Last Updated 15 ಜನವರಿ 2019, 19:45 IST
‘ಅಭಿಯಾನ’ ನಾಟಕದ ದೃಶ್ಯ
‘ಅಭಿಯಾನ’ ನಾಟಕದ ದೃಶ್ಯ   

ಹದಿನಾಲ್ಕು ವರ್ಷಗಳಿಂದ ಸಕ್ರಿಯವಾಗಿರುವ ‘ದೃಶ್ಯ’ ರಂಗತಂಡ, ಜ. 16ರಿಂದ 18ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ದೃಶ್ಯ ನಾಟಕೋತ್ಸವ ಆಯೋಜಿಸಿದೆ.

ನಾಟಕ ಕಟ್ಟುವುದು ಬದುಕು ಕಟ್ಟುವ ಕಲೆಯ ಮುಂಚಾಚು ಅಂತಲೇ ಪರಿಭಾವಿಸುವ ನಾವು, ಸಾಹಿತ್ಯ–ಸಂಸ್ಕೃತಿಯ ಹಲವು ಸಂಗತಿಗಳನ್ನು ರಂಗಬದುಕಿನೊಳಗೆ ಒಳಗೊಳ್ಳುತ್ತಲೇ ಬಂದಿದ್ದೇವೆ. ಈ ದಿಸೆಯಲ್ಲಿ ಏಳು ವರ್ಷಗಳಿಂದ ದೃಶ್ಯ ನಾಟಕೋತ್ಸವ ಆಯೋಜಿಸುತ್ತಿದ್ದೇವೆ ಎಂದು ಮಾಹಿತಿ ನೀಡುತ್ತಾರೆ ‘ದೃಶ್ಯ’ರಂಗತಂಡದ ಸಂಸ್ಥಾಪಕ ನಿರ್ದೇಶಕಿ ದಾಕ್ಷಾಯಣಿ ಭಟ್.

ಉತ್ಸವದಲ್ಲಿ ಸ್ತ್ರೀಕಥನ ಗಾನಯಾನ, ರಂಗ ಪ್ರಶಂಸನಾ ಕಾರ್ಯಾಗಾರ, ಕಿರುಚಿತ್ರ ಪ್ರದರ್ಶನ ಮತ್ತು ನಾಟಕಗಳ ಪ್ರದರ್ಶನ, ರಂಗಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ‌

ADVERTISEMENT

ಜ. 16ರಂದು ನಾಟಕೋತ್ಸವನ್ನು ಹಿರಿಯ ರಂಗಕರ್ಮಿ ಡಾ.ವಿಜಯಾ ಉದ್ಘಾಟಿಸುವರು. ಅಂದು ಸಂಜೆ 7ಕ್ಕೆ ಖ್ಯಾತ ಗಾಯಕಿಯರಾದ ಬಿಂದುಮಾಲಿನಿ ಮತ್ತು ಎಂ.ಡಿ. ಪಲ್ಲವಿ ‘ಸ್ತ್ರೀಕಥನ’ ಗಾನಯಾನ ಪ್ರಸ್ತುತಪಡಿಸುವರು. ’ದಿ ತ್ರಷ್‌ಹೋಲ್ಡ್‌’ ಎಂಬುದು ಪಲ್ಲವಿ ಮತ್ತು ಬಿಂದುಮಾಲಿನಿ ನಡುವಿನ ಸಂಗೀತ–ಸಂಭಾಷಣೆ. ಇದರಲ್ಲಿ ಜಗತ್ತಿನಾದ್ಯಂತದ ಹಲವು ತಲೆಮಾರುಗಳ ಮಹಿಳೆಯರ ಕಥನಗಳ ನಿರೂಪಣೆಯಿದೆ.

ಹೈಪಾಶಿಯ, ಅಗ್ನೋಡಿಸ್, ಖಾರ್‌ಬೋಶ್, ಫಾನ್ಸಿ ಮೆಂಡೆಲನ್ಸ್ ಅವರ ಕಥೆಗಳು, ಲಲ್ಲಾ, ಲಿಂಗಮ್ಮ, ನೀಲಮ್ಮ, ಗೊಗ್ಗವ್ವ, ಸೂಳೆ ಸಂಕವ್ವ, ನೀನಾ ಸೈಮನ್, ಮೀರಾ ಇವರ ಹಾಡುಗಳ ಮೂಲಕ ಪಲ್ಲವಿ ಮತ್ತು ಬಿಂದು ಸ್ತ್ರೀ ಜೀವನದ ಪಯಣವನ್ನು ಸುಂದರವಾಗಿ ಹೆಣೆಯುತ್ತಾ ತಮ್ಮ ಧ್ವನಿಯ ಮೂಲಕ ನಿರೂಪಿಸುತ್ತಾರೆ. ಹಾರ್ಮೋನಿಯಂ, ಕೊಳಲು, ಸ್ವರಮಂಡಲ, ಗಂಟೆ ಮೊದಲಾದ ವಾದ್ಯಗಳ ಮೂಲಕ ಸಂಗೀತರೂಪಕವನ್ನು ಸೃಷ್ಟಿಸುತ್ತಾರೆ.

17ರಂದು ಬೆಳಿಗ್ಗೆ 10.30ರಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಡಾ.ಶ್ರೀಪಾದ್ ಭಟ್ ರಂಗ ಪ್ರಶಂಸನಾ ಕಾರ್ಯಾಗಾರ ನಡೆಸಿಕೊಡುವರು. ಸಂಜೆ 4.30ಕ್ಕೆ ನರೇಶ್‌ ಹೆಗಡೆ ದೊಡ್ಮರಿ ನಿರ್ದೇಶನದ ‘ಬೆನ್ನಿಗೆಲ್ಲಿಯ ಕಣ್ಣು’ ಹಾಗೂ ನಟೇಶ್ ಹೆಗಡೆ ನಿರ್ದೇಶನದ ‘ಕುರ್ಲಿ’ ಕಿರುಚಿತ್ರಗಳು ಪ್ರದರ್ಶನವಾಗಲಿವೆ. ರಾತ್ರಿ 7ಕ್ಕೆ ಜಯಪ್ರಕಾಶ ಮಾವಿನಕುಳಿ ರಚಿಸಿರುವ, ದಾಕ್ಷಾಯಣಿ ಭಟ್ ನಿರ್ದೇಶನದ ‘ಅಭಿಯಾನ’ ನಾಟಕ ಪ್ರದರ್ಶನವಿದೆ.

18ರಂದು ಸಂಜೆ 6ಕ್ಕೆ ರಂಗಸಂಗೀತ ಕಾರ್ಯಕ್ರಮ ನಡೆಯಲಿದೆ. ಸ್ವಸ್ತಿಕ್, ಶೋಧನ್, ಸುಹಾಸ್, ಭರತ್, ಮೇಘನಾ, ಹರ್ಷವರ್ಧನ್, ತ್ರಿವೇಣಿ, ಸಿಂಧು, ಸಾವನ್, ಪುನೀತ್ ರಂಗಗೀತೆಗಳನ್ನು ಹಾಡಲಿದ್ದಾರೆ. ರಾತ್ರಿ 7ಕ್ಕೆ ಭೀಷ್ಮ ಸಹಾನಿ ರಚನೆಯ, ದಾಕ್ಷಾಯಣಿ ಭಟ್‌ ನಿರ್ದೇಶನದ ‘ಹಾನೂಶ್‌’ ನಾಟಕ ಪ್ರದರ್ಶನವಿದೆ.

ದೃಶ್ಯ ನಾಟಕೋತ್ಸವ: ಉದ್ಘಾಟನೆ–ಡಾ.ವಿಜಯಾ, ಅತಿಥಿಗಳು–ಬಲವಂತರಾವ್ ಪಾಟೀಲ್, ಎಸ್. ರಘುನಂದನ, ಆನೂರು ಅನಂತ ಕೃಷ್ಣಶರ್ಮ. ರಂಗಗೌರವ–ಕೆರೆಮನೆ ಶಿವಾನಂದ ಹೆಗಡೆ, ಸೇತುರಾಂ, ಎಸ್.ಮಾಲತಿ, ಪುರುಷೋತ್ತಮ ತಲವಾಟ. ಆಯೋಜನೆ–ದೃಶ್ಯ ರಂಗತಂಡ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.