ADVERTISEMENT

‘ಕಿರುಕುಳ ಅನುಭವಿಸಿ ಬಂದವರಿಗೆ ಪೌರತ್ವ’

ಸಿಎಎ ಕುರಿತು ಸಿಎಂಆರ್ ತಾಂತ್ರಿಕ ಸಂಸ್ಥೆಯಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 22:08 IST
Last Updated 17 ಫೆಬ್ರುವರಿ 2020, 22:08 IST
ಕಾರ್ಯಕ್ರಮವನ್ನು ಸ್ವಪ್ನದಾಸ್ ಗುಪ್ತ, ಕೆ.ಸಿ. ರಾಮಮೂರ್ತಿ, ಅರವಿಂದ ಲಿಂಬಾವಳಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಸ್ವಪ್ನದಾಸ್ ಗುಪ್ತ, ಕೆ.ಸಿ. ರಾಮಮೂರ್ತಿ, ಅರವಿಂದ ಲಿಂಬಾವಳಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು   

ವೈಟ್‌ಫೀಲ್ಡ್‌: ‘ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದು, ಆರು ವರ್ಷಕ್ಕೂ ಮೇಲ್ಪಟ್ಟು ನಮ್ಮ ದೇಶದಲ್ಲಿಯೇ ವಾಸವಾಗಿದ್ದರೆ ಅವರು ಭಾರತದ ಪೌರತ್ವ ಪಡೆಯಬಹುದು’ ಎಂದುಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ ಸ್ವಪ್ನದಾಸ್ ಗುಪ್ತ ಹೇಳಿದರು.

ವೈಟ್‌ಫೀಲ್ಡ್‌ ಸಮೀಪದ ಕುಂದಲಹಳ್ಳಿಯ ಸಿಎಂಆರ್ ತಾಂತ್ರಿಕ ಸಂಸ್ಥೆ ಆವರಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಈ ಕಾಯ್ದೆ ಬಗ್ಗೆ ಗೊಂದಲವಿದೆ. ಸ್ಥಳೀಯ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕು’ ಎಂದರು.

ಜಮ್ಮು ಕಾಶ್ಮೀರದ ಹಿರಿಯ ಪತ್ರಕರ್ತ ರಮೇಶ್ ಕುಮಾರ್ ಮೊಟ್ಟೊ, ‘ಕಾನೂನುಬದ್ಧ ಪಾಸ್‌ಪೋರ್ಟ್ ಅಥವಾ ಸೂಕ್ತ ದಾಖಲೆ ಇಲ್ಲದೆ ಭಾರತಕ್ಕೆ ನುಸುಳಿದವರು ಭಾರತದ ಸಂವಿಧಾನದ ಪ್ರಕಾರ ಅಕ್ರಮ ವಲಸಿಗರಾಗಿದ್ದಾರೆ. ಪೌರತ್ವ ಕಾಯ್ದೆಯನ್ನು ಸೂಕ್ತವಾಗಿ ಯಾರಿಗೂ ತೊಂದರೆ ಆಗದಂತೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ’ ಎಂದರು.

ADVERTISEMENT

ಶಾಸಕ ಅರವಿಂದ ಲಿಂಬಾವಳಿ, ‘ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರನ್ನು ಕಾನೂನು ಮೂಲಕ ಹೊರ ಹಾಕುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದ ವಾಸಿಸುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದಾಗ ಕೆಲವು ಸರ್ಕಾರೇತರ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋದವು’ ಎಂದರು.

‘ಬೆಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.