ADVERTISEMENT

ಬಜೆಟ್‌ 2021: ಕೋವಿಡ್‌ ಲಸಿಕೆಗೆ ₹ 35,000 ಕೋಟಿ, ಆರೋಗ್ಯಕ್ಕಾಗಿ ₹ 64,180 ಕೋಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 6:51 IST
Last Updated 1 ಫೆಬ್ರುವರಿ 2021, 6:51 IST
ಕೋವಿಡ್‌ ಲಸಿಕೆ ನೋಂದಣಿ–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ ನೋಂದಣಿ–ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಆತ್ಮನಿರ್ಭರ ಭಾರತದಿಂದ ಆಗಿರುವ ಸಕಾರಾತ್ಮ ಪರಿಣಾಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆಯಲ್ಲಿ ತೆರೆದಿಟ್ಟರು. ಮೊದಲಿಗೆ ಆರೋಗ್ಯ ಕ್ಷೇತ್ರದಲ್ಲಿ ಯೋಜನೆಗಳನ್ನು ಪ್ರಕಟಿಸಿದರು.

ಕೇಂದ್ರದಿಂದ 'ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ ಯೋಜನೆ' ಆರಂಭಿಸಲಾಗುತ್ತದೆ. ಈ ಯೋಜನೆಗಳಿಗಾಗಿ ಮುಂದಿನ 6 ವರ್ಷಗಳಿಗೆ ₹ 64,180 ಕೋಟಿ ವಿನಿಯೋಗಿಸಲಾಗುತ್ತದೆ ಎಂದರು.

ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಸಾಮರ್ಥ್ಯ ಹೆಚ್ಚಿಸಲು, ಹೊಸ ಹಾಗೂ ಸೃಷ್ಟಿಯಾಗಬಹುದಾದ ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.

ADVERTISEMENT

ಲಸಿಕೆಗೆ ₹ 35,000 ಕೋಟಿ

2021-22ನೇ ಸಾಲಿನಲ್ಲಿ ಕೋವಿಡ್‌–19 ಲಸಿಕೆಗಾಗಿ ₹35,000 ಕೋಟಿ ವಿನಿಯೋಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ನ್ಯುಮೋನಿಯಾ ತಡೆಗಟ್ಟು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಲಸಿಕೆಯು ಪ್ರಸ್ತುತ 5 ರಾಜ್ಯಗಳಿಗೆ ಮಾತ್ರ ಸೀಮಿತವಾಗಿದ್ದು, ದೇಶದಾದ್ಯಂತ ತಲುಪುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದಾಗಿ ವಾರ್ಷಿಕ ಸುಮಾರು 50,000 ಮಕ್ಕಳ ಸಾವು ತಪ್ಪಿಸುತ್ತದೆ.

ರೋಗಗಳಿಂದ ತಡೆಗಟ್ಟುವಿಕೆ, ರೋಗ ನಿವಾರಕ, ಯೋಗ ಕ್ಷೇಮ; ಆರೋಗ್ಯ ಸಂಬಂಧಿತ ಮೂರು ವಲಯಗಳಾಗಿ ವಿಂಗಡಿಸಿ ಬಲಗೊಳಿಸಲಾಗುತ್ತದೆ.

ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ ಯೋಜನೆ ಅಡಿಯಲ್ಲಿ ಬಲಗೊಳ್ಳಲಿರುವ ವಲಯಗಳು–

* ಆರೋಗ್ಯ ಮತ್ತು ಚಿಕಿತ್ಸಕ ಕೇಂದ್ರಗಳಿಗೆ ಬೆಂಬಲ
* ಎಲ್ಲ ಜಿಲ್ಲೆಗಳಲ್ಲಿಯೂ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಸ್ಥಾಪನೆ
* ತುರ್ತು ನಿಗಾ ಆಸ್ಪತ್ರೆ ಬ್ಲಾಕ್‌ಗಳು
* ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಬಲಗೊಳಿಸುವುದು

ರಾಷ್ಟ್ರ ಮುನ್ನಡೆ, ರೈತರ ಆದಾಯ ಹೆಚ್ಚಳ, ಮೂಲಭೌತ ಸೌಕರ್ಯಗಳನ್ನು ಬಲ ಪಡಿಸುವುದು, ಮಹಿಳಾ ಸಬಲೀಕರಣ, ಆರೋಗ್ಯ ಭಾರತ, ಉತ್ತರ ಆಡಳಿತ, ಸರ್ವರಿಗೂ ಶಿಕ್ಷಣ ಹಾಗೂ ಎಲ್ಲವನ್ನೂ ಒಳಗೊಂಡ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.

ಭಾರತದಲ್ಲಿ ಪ್ರಸ್ತುತ ಎರಡು ಕೋವಿಡ್‌–19 ಲಸಿಕೆಗಳಿವೆ, ನಾವು ನಮ್ಮ ಜನರು ಹಾಗೂ 100ಕ್ಕೂ ಹೆಚ್ಚು ರಾಷ್ಟ್ರಗಳ ಜನರನ್ನು ಆರೋಗ್ಯ ರಕ್ಷಣೆ ಮಾಡುತ್ತಿದ್ದೇವೆ. ದೇಶದಿಂದ ಇನ್ನೂ ಎರಡು ಲಸಿಕೆಗಳನ್ನು ನಿರೀಕ್ಷಿಸಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ ಕೋವಿಡ್‌ನಿಂದ ಸಾವಿಗೀಡಾಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆ ಮಟ್ಟ ತಲುಪಿದ್ದು, ಪ್ರತಿ 10 ಲಕ್ಷ ಜನರಿಗೆ 112 ಜನರು ಸಾವಿಗೀಡಾಗಿದ್ದರೆ, 130 ಪ್ರಕರಣಗಳು ಸಕ್ರಿಯವಾಗಿವೆ ಎಂದರು.

ಎಲ್ಲ ಆತ್ಮನಿರ್ಭರ ಭಾರತ ಪ್ಯಾಕೇಜ್‌ ಹಾಗೂ ಆರ್‌ಬಿಐನ ಕ್ರಮಗಳಿಂದಾಗಿ ₹27.1 ಲಕ್ಷ ಕೋಟಿ (ಜಿಡಿಪಿಯ ಶೇ 13ರಷ್ಟು ಅಧಿಕ) ಆರ್ಥಿಕ ಪರಿಣಾಮ ಉಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.