ADVERTISEMENT

ರೈತರ ಪ್ರತಿಭಟನೆಯಿಂದ ₹50,000 ಕೋಟಿ ನಷ್ಟ

ಪಿಟಿಐ
Published 21 ಜನವರಿ 2021, 15:05 IST
Last Updated 21 ಜನವರಿ 2021, 15:05 IST
ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ (ಪಿಟಿಐ)
ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ (ಪಿಟಿಐ)   

ದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಅಥವಾ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ₹50,000 ಕೋಟಿ ನಷ್ಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.

ಕೃಷಿ ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಡುವ, ಕೃಷಿಕರನ್ನೂ ಒಳಗೊಂಡಂತೆ ಸಮಿತಿಯನ್ನು ರಚಿಸುವ ಕೇಂದ್ರ ಸರ್ಕಾರದ ಹೊಸ ಪ್ರಸ್ತಾವವು ಸೂಕ್ತ ಹಾಗೂ ನ್ಯಾಯಸಮ್ಮತವೆನಿಸುತ್ತಿದೆ. ಇದು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ಸಿಎಐಟಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇನ್‌ವಾಲಾ ಅಭಿಪ್ರಾಯಪಟ್ಟಿದ್ದಾರೆ.

'ಕೃಷಿಕ ಸಮುದಾಯ ಮತ್ತು ಕೃಷಿ ಉತ್ಪನ್ನ ವ್ಯವಹಾರದಲ್ಲಿ ತೊಡಗಿರುವವರ ಹಿತದೃಷ್ಟಿಯಿಂದ ಸರ್ಕಾರದ ಈ ಪ್ರಸ್ತಾವವನ್ನು ರೈತರು ಒಪ್ಪುವುದು ಒಳ್ಳೆಯದು. ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದು ಸೂಕ್ತ,' ಎಂದು ಖಂಡೇನ್‌ವಾಲಾ ಹೇಳಿದ್ದಾರೆ.

ADVERTISEMENT

'ರೈತರು ಸರ್ಕಾರದ ಪ್ರಸ್ತಾವನೆಯನ್ನು ಒಪ್ಪದೇ ಹೋದರೆ, ಅವರು ಪರಿಹಾರದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ನಿರ್ಣಯಿಸಲಾಗುತ್ತದೆ. ಆದರೆ, ಕೆಲವು ವಿಭಜಕ ಶಕ್ತಿಗಳು ಸಮಸ್ಯೆಗಳನ್ನು ಸೃಷ್ಟಿಸಲು ಸಿದ್ಧರಿರುತ್ತವೆ,' ಎಂದು ಅವರು ಹೇಳಿದರು.

ಉದ್ದೇಶಿತ ಜಂಟಿ ಸಮಿತಿಯಲ್ಲಿ ವ್ಯಾಪಾರಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಖಂಡೇನ್‌ವಾಲಾ ಸರ್ಕಾರಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.