ADVERTISEMENT

ಕೆಐಒಸಿಎಲ್: ಉತ್ಪಾದನಾ ಚಟುವಟಿಕೆ ವಿಸ್ತರಣೆ ಯೋಜನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 17:42 IST
Last Updated 17 ಸೆಪ್ಟೆಂಬರ್ 2021, 17:42 IST
ಟಿ. ಸಮಿನಾಥನ್‌
ಟಿ. ಸಮಿನಾಥನ್‌   

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯು (ಕೆಐಒಸಿಎಲ್) ಕಬ್ಬಿಣದ ಅದಿರನ್ನು ಕಚ್ಚಾವಸ್ತು ರೂಪದಲ್ಲಿ ಇತರ ಕಂಪನಿಗಳಿಂದ ಖರೀದಿಸಿ, ಅದರ ಉಂಡೆ (ಪೆಲೆಟ್‌) ಸಿದ್ಧಪಡಿಸಿ, ಪುನಃ ಪೂರೈಕೆ ಮಾಡುವ ಮೂಲಕ ಉತ್ಪಾದನಾ ಚಟುವಟಿಕೆ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆಯ ಸಿಎಂಡಿ ಟಿ. ಸಾಮಿನಾಥನ್ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಮಾನ್ ಮತ್ತು ಉತ್ತರ ಕೊರಿಯಾದ ಎರಡು ಕಂಪನಿಗಳ ಜೊತೆ ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಮೂರು ತಿಂಗಳುಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಮಂಗಳೂರಿನಲ್ಲಿರುವ ತಯಾರಿಕಾ ಘಟಕದ ಶೇ 30ರಿಂದ 40ರಷ್ಟು ಸಾಮರ್ಥ್ಯದ ಮಿತಿಯಲ್ಲಿ ಈ ಕಾರ್ಯ ನಡೆಸಲಾಗುತ್ತದೆ’ ಎಂದರು. ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುವ ಪ್ರಸ್ತಾವಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಒಂದನೇ ಹಂತದ ತಾತ್ವಿಕ ಅನುಮತಿ ದೊರೆತಿದೆ. ಈ ಗಣಿಯಿಂದ ವಾರ್ಷಿಕ 20 ಲಕ್ಷ ಟನ್ ಕಬ್ಬಿಣದ ಅದಿರು ಪಡೆಯಬಹುದಾಗಿದೆ. ಎರಡನೇ ಹಂತದ ಅನುಮತಿ ಮುಂದಿನ ಮಾರ್ಚ್‌ ವೇಳೆಗೆ ದೊರೆತರೆ, 2023ರ ಮಾರ್ಚ್‌ ವೇಳೆ ಗಣಿಗಾರಿಕೆ ಪ್ರಾರಂಭಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT