ADVERTISEMENT

ವಾರ ಭವಿಷ್ಯ: 27-6-2021ರಿಂದ 03-07-2021ರ ವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 26 ಜೂನ್ 2021, 19:30 IST
Last Updated 26 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ADVERTISEMENT

ನಿಮ್ಮ ವ್ಯವಹಾರಗಳ ಗುಟ್ಟನ್ನು ಯಾರಿಗೂ ತಿಳಿಸದೆ ಇರುವುದು ಬಹಳ ಉತ್ತಮ. ಹೊಸ ವ್ಯಾಪಾರದ ಯೋಜನೆಯನ್ನು ಬಹಳ ಎಚ್ಚರಿಕೆಯಿಂದ ಗೌಪ್ಯವಾಗಿ ತಯಾರಿಸಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೂ ನಿಮ್ಮ ಅನಿರೀಕ್ಷಿತ ದುಂದು ವೆಚ್ಚಗಳಿಂದ ಹಣಕಾಸಿನ ಸ್ಥಿತಿ ಏರುಪೇರಾಗಬಹುದು, ಆದ್ದರಿಂದ ಖರ್ಚು ಮಾಡುವ ಮುನ್ನ ಅದರ ಅಗತ್ಯತೆಯನ್ನು ಸರಿಯಾಗಿ ಪರಿಶೀಲಿಸಿ. ಅತಿಯಾಗಿ ಪ್ರೀತಿಸುವವರಿಂದ ಸಲಹೆ ಮತ್ತು ಸಾಂತ್ವನದ ಮಾತುಗಳು ಕೇಳಿಬರುತ್ತವೆ. ನಿಮ್ಮ ಸ್ವಂತ ಆರೋಗ್ಯದ ಕಡೆ ಸರಿಯಾಗಿ ಗಮನಹರಿಸಿರಿ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಿರುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಆಪ್ತ ಗೆಳೆಯರ ನಡುವೆ ಸಣ್ಣ ವಿಚಾರಕ್ಕಾಗಿ ನಿಷ್ಟೂರ ಬರುವ ಸಾಧ್ಯತೆಗಳಿವೆ. ವೈದ್ಯವೃತ್ತಿಯವರಿಗೆ ಕೆಲಸದ ಒತ್ತಡ ಹೆಚ್ಚು ಇರುತ್ತದೆ. ರಾಜಕಾರಣಿಗಳಿಗೆ ಅನುಕೂಲಕರ ರಾಜಕೀಯ ಪರಿಸ್ಥಿತಿ ಏರ್ಪಟ್ಟು ಅವರ ದಾಳವನ್ನು ಉರುಳಿಸಲು ಸುಸಂದರ್ಭ ಸಿಗುತ್ತದೆ. ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಸೌಲಭ್ಯ ಸಿಗಲು ವಿಳಂಬವಾದೀತು. ಸ್ವಲ್ಪ ಒತ್ತಡಗಳನ್ನು ಹೇರಿದಲ್ಲಿ ಸೌಲಭ್ಯಗಳು ದೊರೆಯುತ್ತವೆ. ವಾಹನ ಚಾಲನೆ ವೇಳೆ ಎಚ್ಚರ ಇರಲಿ, ದೂರ ಪ್ರಯಾಣ ಬೇಡ. ಸರ್ಕಾರಿ ಮಟ್ಟದ ಸಹಾಯಧನಗಳು ಹರಿದುಬರುತ್ತವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ನಿಮ್ಮ ಮೇಲೆ ಬಂದಿದ್ದ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಯಶಸ್ವಿಯನ್ನು ಕಾಣುವಿರಿ. ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಕೆಲಸ ದೊರೆತು ಹೆಚ್ಚಿನ ಲಾಭವಾಗುತ್ತದೆ. ಆತ್ಮಗೌರವ ಅತಿಯಾಗಿ ಇರುತ್ತದೆ, ಇದು ಗೌರವವನ್ನು ಜೊತೆಗೆ ಹಿನ್ನಡೆಯನ್ನು ಸಹ ತರಬಹುದು. ಚಿನ್ನಾಭರಣ ತಯಾರು ಮಾಡುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹೊಸ ರೀತಿಯ ತಯಾರಿಕೆಗಾಗಿ ಆದೇಶಗಳು ದೊರೆಯುತ್ತವೆ. ಹಣದ ಒಳ ಹರಿವಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಶುಶ್ರೂಷಕರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಿ ಕಾರ್ಯದೊತ್ತಡ ಹೆಚ್ಚುತ್ತದೆ. ಕ್ರೀಡಾಪಟುಗಳು ಬರುವ ಅವಕಾಶಗಳನ್ನು ಬಿಡುವುದು ಬೇಡ, ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಅವಕಾಶಗಳನ್ನು ಬಳಸಿರಿ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ದೂರ ಪ್ರಯಾಣದಿಂದ ಉಂಟಾದ ಆಯಾಸದಿಂದ ಚೇತರಿಸಿಕೊಳ್ಳುವಿರಿ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೆಲವು ಕಠಿಣ ಪರಿಸ್ಥಿತಿಗಳು ಎದುರಾಗಬಹುದು. ತಾಂತ್ರಿಕ ತರಬೇತಿಯನ್ನು ಪಡೆಯುತ್ತಿರುವವರು ಹೆಚ್ಚಿನ ಶ್ರಮ ವಹಿಸಬೇಕು, ಆಗ ಮುಂದಿನ ದಾರಿಗಳು ಅವರಿಗೆ ಸುಲಭವಾಗುತ್ತದೆ. ಕಛೇರಿ ಕೆಲಸಗಳಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಲು ತರಬೇತಿಗೆ ಹೋಗುವ ಅವಕಾಶ ದೊರೆಯುತ್ತದೆ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸಾಲಗಳನ್ನು ಈಗ ವಸೂಲಿ ಮಾಡಲು ಆರಂಭಿಸಬಹುದು. ಹರಳುಗಳನ್ನು ತೆಗೆದು ಶುದ್ಧೀಕರಿಸಿ ಮಾರುವವರಿಗೆ ಉತ್ತಮ ವ್ಯಾಪಾರವಿರುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳ ಕಿರುಕುಳ ಹೆಚ್ಚಾಗಬಹುದು. ಮಕ್ಕಳ ಪ್ರಗತಿಯು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿಗೆ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಯಾವುದೇ ಕೆಲಸಗಳಲ್ಲಿ ಅತಿ ಅವಸರ ಬೇಡ. ತಲೆನೋವು ಅಥವಾ ಬೆನ್ನು ನೋವು ಕಾಡಬಹುದು. ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣಬಹುದು. ವ್ಯವಹಾರದಲ್ಲಿ ನಿಮ್ಮ ದಿಢೀರ್ ನಿರ್ಧಾರದಿಂದ ಹಿನ್ನಡೆಯಾಗಿ ಬೇಸರವಾಗಬಹುದು. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ವಿದೇಶಿ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಹಣದ ಹರಿವು ಉತ್ತೇಜನಕಾರಿಯಾಗಿರುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ರಾಜಕಾರಣಿಗಳಿಗೆ ತಮ್ಮ ಹೇಳಿಕೆಯಿಂದ ಮುಜುಗರವುಂಟಾಗುವ ಸಂದರ್ಭವಿದೆ. ಸಾಮಾಜಿಕ ಕಾರ್ಯಕರ್ತರುಗಳಿಗೆ ಅನಿರೀಕ್ಷಿತ ಗೌರವ ದೊರೆಯುವ ಸಂದರ್ಭವಿದೆ. ನಿಮ್ಮ ಸಂಪನ್ಮೂಲಕ್ಕೆ ಅನುಗುಣವಾಗಿ ಕಾರ್ಯಗಳನ್ನು ಜಾರಿಗೊಳಿಸುವುದು ಉತ್ತಮ. ವ್ಯಾಪಾರಿಗಳಿಗೆ ವ್ಯಾಪಾರದ ಬಗ್ಗೆ ಪ್ರೋತ್ಸಾಹ ದೊರೆಯುತ್ತದೆ. ಕೆಲವು ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ಸಿಗಬಹುದು. ಮಕ್ಕಳ ನಡುವೆ ಕಾವೇರಿದ ಮಾತಾಗಬಹುದು. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ವೃತ್ತಿಯಲ್ಲಿ ಪದೋನ್ನತಿಯ ಸಂದರ್ಭದಲ್ಲಿ ನಿಮ್ಮ ಚೇಷ್ಟೆ ಮಾತು ಅದನ್ನು ಹಾಳುಗೆಡವಬಹುದು. ಕೃತಕ ಬುದ್ಧಿಮತ್ತೆಯ ಜೊತೆ ಕೆಲಸ ಮಾಡುವವರು ಬಹಳ ಎಚ್ಚರವಾಗಿರಿ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿಮ್ಮ ಸಂತೋಷದ ವಿಚಾರಗಳಲ್ಲಿ ಕುಟುಂಬದ ಸಹಕಾರ ಖಂಡಿತ ದೊರೆಯುತ್ತದೆ. ಸಮಾಜ ಸೇವೆಯನ್ನು ಮಾಡುವವರಿಗೆ ಸಾಫಲ್ಯತೆಯ ನೆಮ್ಮದಿ ದೊರೆಯುತ್ತದೆ. ಆರ್ಥಿಕ ರಂಗದಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ದ್ವಂದ್ವ ನಿರ್ಧಾರವನ್ನು ಬಿಟ್ಟು ಸ್ಥಿರ ನಿರ್ಧಾರಗಳಿಂದ ವ್ಯವಹರಿಸಿದಲ್ಲಿ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಕೃಷಿಕರು ಉತ್ತಮ ಬೆಳೆಯನ್ನು ಪಡೆಯುವ ಯೋಗವಿದೆ. ತಂದೆಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಮನೆಗೆ ಸತ್ಪುರುಷರ ಆಗಮನವಾಗಲಿದೆ. ಮನೆಯಲ್ಲಿ ದೈವತಾ ಕಾರ್ಯಗಳು ನಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಉನ್ನತಿಯಾಗಿ ಧನಲಾಭ ಬರುತ್ತದೆ. ಆಭರಣ ಖರೀದಿಯ ಆಸಕ್ತಿಯನ್ನು ಹೊಂದುವಿರಿ. ಭಾಷಣಕಾರರಿಗೆ ಉತ್ತಮ ವಸ್ತು ದೊರೆತು ತಮ್ಮ ವಾಕ್ ಚಾತುರ್ಯದಿಂದ ಜನರನ್ನು ರಂಜಿಸುವರು. ಕಲ್ಪನೆ ಮತ್ತು ವಾಸ್ತವ್ಯದ ನಡುವಿನ ಅಂತರವನ್ನು ತಿಳಿದು ಮುಂದುವರೆಯುವುದು ಉತ್ತಮ. ಯಾರ ಬಗ್ಗೆಯೂ ಪೂರ್ವಾಗ್ರಹ ಪೀಡಿತರಾಗಿ ಇರುವುದು ಒಳಿತಲ್ಲ. ಧನದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಪತ್ರಿಕಾ ವರದಿಗಾರರು ಎಚ್ಚರವಾಗಿರುವುದು ಒಳ್ಳೆಯದು, ಅವರ ಅತಿ ಉತ್ಸಾಹ ಪತ್ರಿಕೆಗೆ ಕೆಟ್ಟ ಹೆಸರು ತರಬಹುದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಕಾರ್ಯಯೋಜನೆಗಳಲ್ಲಿ ನೀವು ಮಾಡುವ ಬದಲಾವಣೆಗಳು ಸಕಾರಾತ್ಮಕ ಫಲಿತಾಂಶವನ್ನು ಕೊಡುತ್ತದೆ. ಸಮಾಧಾನ ಚಿತ್ತದಿಂದ ಚಿಂತಿಸಿ ಆರ್ಥಿಕ ಸುಧಾರಣೆಯನ್ನು ಸರಿದಾರಿಗೆ ತರಬಹುದು. ಹಿರಿಯರು ಮಾತನಾಡುವಾಗ ತಮ್ಮ ಮಾತಿನ ಮೇಲೆ ಹತೋಟಿಯನ್ನು ಇಟ್ಟುಕೊಳ್ಳುವುದು ಬಹಳ ಒಳಿತು. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲತೆಗಳು ಒದಗಿ ಬರುತ್ತವೆ. ನನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಒಂದೊಂದಾಗಿ ಆರಂಭಿಸಿದಲ್ಲಿ ಯಶಸ್ಸನ್ನು ಖಂಡಿತಾ ಕಾಣಬಹುದು. ಮೂಳೆ ಸಂಬಂಧಿ ತೊಂದರೆ ಇರುವವರು ಔಷಧೋಪಚಾರಗಳನ್ನು ಪಡೆಯುವುದು ಉತ್ತಮ. ವಾರಾಂತ್ಯಕ್ಕೆ ದೈವ ಕಾರ್ಯದಲ್ಲಿ ಪಾಲ್ಗೊಳ್ಳುವ ಯೋಗವಿದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)

ಕಠಿಣ ಪರಿಶ್ರಮದಿಂದ ಕಾರ್ಯದಲ್ಲಿ ಯಶಸ್ಸನ್ನು ಪಡೆಯುವಿರಿ, ಎದುರಾಳಿಗಳ ತೊಂದರೆ ಇದ್ದರೂ ಸಹ ಅದನ್ನು ಎದುರಿಸಿ ಮುನ್ನಡೆಯುವಿರಿ. ವ್ಯವಹಾರದಲ್ಲಿ ನಿಮ್ಮ ವಿರೋಧಿ ಬಣದ ತಂತ್ರಗಳು ನಿಮಗೆ ತಿಳಿದು ಅವರನ್ನು ಸುಮ್ಮನಾಗಿಸುವಿರಿ. ಅಗತ್ಯಕ್ಕೆ ತಕ್ಕಷ್ಟು ಧನಾಗಮನವಿರುತ್ತದೆ. ನಿವೃತ್ತರಿಗೆ ಹೊಸ ರೀತಿಯ ಕೆಲಸಗಳು ದೊರೆಯಬಹುದು. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದೀತು. ಕಣ್ಣಿನ ತೊಂದರೆ ಇದ್ದವರು ಎಚ್ಚರ ವಹಿಸಿರಿ. ಕೆಲವರು ತಮ್ಮ ಕಾರ್ಯಸಾಧನೆಗಾಗಿ ನಿಮ್ಮನ್ನು ಹೊಗಳುವರು ಇಂಥವರ ಬಗ್ಗೆ ಎಚ್ಚರವಹಿಸಿರಿ. ಅವಿವಾಹಿತರಿಗೆ ವಿವಾಹ ಸಂಬಂಧಗಳನ್ನು ನೋಡಬಹುದು. ಖರ್ಚಿಗೆ ಕಡಿವಾಣ ಹಾಕುವುದು ಉತ್ತಮ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಹಿರಿಯರು ದೀನದಲಿತರಿಗೆ ಸಹಾಯಮಾಡಿ ಸಂತೋಷಪಡುವರು. ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿ ಮುನ್ನಡೆಯಿರಿ. ಯುವಕರಿಗೆ ಉದ್ಯೋಗ ನಷ್ಟದ ಪರಿಸ್ಥಿತಿ ಬರಬಹುದು. ಶಸ್ತ್ರಚಿಕಿತ್ಸೆ ಆಗಿರುವವರು ಶೀಘ್ರವಾಗಿ ಗುಣಮುಖರಾಗುವ ಯೋಗವಿದೆ. ಸ್ನೇಹಿತರೊಡನೆ ಕೂಡಿ ಮಾಡಿದ ಆರ್ಥಿಕ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಹೈನುಗಾರಿಕೆಯನ್ನು ಮಾಡುವವರಿಗೆ ಆದಾಯ ವೃದ್ಧಿಸುತ್ತದೆ. ಗಣಿಗಾರಿಕೆ ಮಾಡುವವರು ಉತ್ತಮ ಆದಾಯದ ನಿರೀಕ್ಷೆಯನ್ನು ಕಾಣಬಹುದು. ನಿಮ್ಮ ಪ್ರೇಮನಿವೇದನೆಗೆ ಸಕಾರಾತ್ಮಕ ಸಂವೇದನೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅಥವಾ ಸಂಘ-ಸಂಸ್ಥೆಗಳಿಂದ ಸಹಾಯ ದೊರೆಯುತ್ತದೆ. ವಾರಾಂತ್ಯಕ್ಕೆ ಸುಖ ಭೋಜನದ ಯೋಗವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮ ಮನಸ್ಸಿನ ದುಗುಡವನ್ನು ಆಪ್ತರ ಬಳಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುವಿರಿ. ನವೀನ ರೀತಿಯ ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ವಸ್ತ್ರಗಳ ಮೇಲೆ ಕುಸುರಿ ಕೆಲಸವನ್ನು ಮಾಡುವವರೆಗೆ ಆದಾಯ ಬರುತ್ತದೆ. ಕೆಲವು ಸಣ್ಣ ಉದ್ದಿಮೆಗಳನ್ನು ಕಂಡುಕೊಳ್ಳಬೇಕೆನ್ನುವವರಿಗೆ ಈಗ ಸಕಾಲ. ಹಿರಿಯರ ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸವನ್ನು ಕಾಣಬಹುದು. ವಿನಾಕಾರಣ ಬಂಧುಗಳ ಬಗ್ಗೆ ಮಾತನಾಡಿ ವಿರಸ ತಂದುಕೊಳ್ಳುವಿರಿ. ಸಂಗಾತಿಯ ಅಭಿಪ್ರಾಯಕ್ಕೆ ಮನ್ನಣೆಕೊಡುವುದು ಬಹಳ ಉತ್ತಮ. ಕಳೆದುಹೋದ ಹಣ ಅಥವಾ ವಸ್ತುಗಳ ಬಗ್ಗೆ ಚಿಂತನೆ ಮಾಡದಿರುವುದು ಉತ್ತಮ. ನಿಮ್ಮ ಖರ್ಚಿಗೆ ತಕ್ಕಷ್ಟು ಆದಾಯವಿರುತ್ತದೆ ಹಾಗಾಗಿ ವೆಚ್ಚಕ್ಕೆ ಕಡಿವಾಣ ಹಾಕಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.