ADVERTISEMENT

ಟ್ವೀಟ್ ಮಾಡಿ ಅಲ್ಲಗಳೆದ ಸಚಿವ- ಮಾಸ್ಕ್ ಧರಿಸುವುದು ಜನರಿಗೆ ಬಿಟ್ಟಿದ್ದು: ಕತ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:58 IST
Last Updated 18 ಜನವರಿ 2022, 15:58 IST
ಅರಣ್ಯ ಸಚಿವ ಉಮೇಶ ಕತ್ತಿ
ಅರಣ್ಯ ಸಚಿವ ಉಮೇಶ ಕತ್ತಿ   

ಅಥಣಿ: ‘ಕೊರೊನಾ ವೈರಸ್ ಸೋಂಕು ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಬಿಡುವುದು ಅವರವರಿಗೆ ಬಿಟ್ಟಿದ್ದು’ ಎಂದು ಅರಣ್ಯ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ರಾತ್ರಿ ಮಾತನಾಡಿದ ಅವರು, ‘ನನಗೆ ಮನಸ್ಸಿಲ್ಲ; ಮಾಸ್ಕ್‌ ಹಾಕುವುದಿಲ್ಲ’. ‘ಕೊರೊನಾ ನಿಯಮಗಳಲ್ಲಿ ಕೆಲವನ್ನು ಕೇಂದ್ರ ಸರ್ಕಾರವೇ ಸಡಿಲಿಕೆ ಮಾಡಿದೆ. ಮಾಸ್ಕ್ ಧರಿಸುವುದು, ಬಿಡುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಈಚೆಗೆ ಹೇಳಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಖಾಲಿಯಾದ ತಕ್ಷಣ ನಿಮಗೆ (ಮಾಧ್ಯಮದವರಿಗೆ) ಹೇಳುತ್ತೇನೆ. ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್‌ ರಚಿಸಲಾಗುವುದು ಎನ್ನುವುದು ಸತ್ಯಕ್ಕೆ ದೂರ. ಜ.24ರ ನಂತರ ಪ್ರಕ್ರಿಯೆ ನಡೆಯಲಿದೆ ಎಂದು ಕೆಲವರು ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ’ ಎಂದರು.

ADVERTISEMENT

‘ಸಚಿವ ಸಂಪುಟದಲ್ಲಿ 4 ಸ್ಥಾನಗಳು ಖಾಲಿ ಇವೆ. ಅವುಗಳನ್ನು ತುಂಬುವುದು ಅಥವಾ ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು’ ಎಂದು ಕತ್ತಿ ಪ್ರತಿಕ್ರಿಯಿಸಿದರು.

ಮಾಸ್ಕ್ ಬಳಕೆ ಕುರಿತ ತಮ್ಮ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಸಚಿವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ‘ಮಾಸ್ಕ್‌ ಹಾಕುವ ವಿಚಾರದಲ್ಲಿ ಎಲ್ಲರೂ ಜವಾಬ್ದಾರಿ ಅರಿತು ಪಾಲಿಸಬೇಕು ಎನ್ನುವುದು ನನ್ನ ಹೇಳಿಕೆಯಾಗಿತ್ತು. ಮಾಸ್ಕ್ ಹಾಕಬೇಡಿ ಎಂದು ಯಾರಿಗೂ ಹೇಳಿಲ್ಲ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸುವುದು ಬೇಡ. ತಪ್ಪಾಗಿ ಅರ್ಥೈಸಿ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿಯನ್ನು ನಾವೆಲ್ಲರೂ ಪಾಲಿಸೋಣ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.