ADVERTISEMENT

ಸುಳ್ಳು ಮೊಕದ್ದಮೆ ಹೂಡುತ್ತಿದ್ದ ಆರೋಪ: ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 20:47 IST
Last Updated 19 ಆಗಸ್ಟ್ 2022, 20:47 IST
ನಾರಾಯಣಸ್ವಾಮಿ
ನಾರಾಯಣಸ್ವಾಮಿ   

ಬೆಂಗಳೂರು: ‘ಸಾರ್ವಜನಿಕರ ಆಸ್ತಿಗಳ ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಸುಳ್ಳು ಮೊಕದ್ದಮೆ ಹೂಡುತ್ತಿದ್ದ ಆರೋಪದಡಿ ರೌಡಿ ಡಿ.ಸಿ. ನಾರಾಯಣಸ್ವಾಮಿ ಅಲಿಯಾಸ್ ಬೂಟ್‌ ನಾರಾಯಣಸ್ವಾಮಿಯನ್ನು (43) ಬಂಧಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

‘ದೇವನಹಳ್ಳಿ ತಾಲ್ಲೂಕಿನ ದ್ಯಾವರಹಳ್ಳಿ ಗ್ರಾಮದ ನಾರಾಯಣಸ್ವಾಮಿ, ಬೆಂಗಳೂರಿನ ಸಹಕಾರ ನಗರದ ಚಿತ್ರಕೂಟ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲಾಟ್‌ನಲ್ಲಿ ವಾಸವಿದ್ದ. ದೇವನಹಳ್ಳಿ ಠಾಣೆಯಲ್ಲಿ ಆಗಸ್ಟ್ 6ರಂದು ದಾಖಲಾಗಿದ್ದ ಪ್ರಕರಣದಲ್ಲಿ ಈತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಆರೋಪಿ ನಾರಾಯಣಸ್ವಾಮಿ ಅಪರಾಧ ಹಿನ್ನೆಲೆಯುಳ್ಳವ. ಹಲ್ಲೆ, ಜೀವ ಬೆದರಿಕೆ, ಅಪಹರಣ, ವಂಚನೆ, ಲೈಂಗಿಕ ದೌರ್ಜನ್ಯ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಾರಾಯಣಸ್ವಾಮಿ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶ್ವನಾಥಪುರ ಠಾಣೆಯ ರೌಡಿ ಪಟ್ಟಿಯಲ್ಲೂ ಈತನ ಹೆಸರಿದೆ’ ಎಂದಿದ್ದಾರೆ.

ADVERTISEMENT

‘ಆರ್‌.ಟಿ.ನಗರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಾರಾಯಣಸ್ವಾಮಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಸಹ ಆಗಿತ್ತು. ಇಷ್ಟಾದರೂ ಆರೋಪಿಯು ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ’ ಎಂದೂ ಹೇಳಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ‘ದ್ಯಾವರಹಳ್ಳಿ ಗ್ರಾಮದ ಕೆಲ ನಿವಾಸಿಗಳ ಜಮೀನನ್ನುಕಬಳಿಸಲು ಸಂಚು ರೂಪಿಸಿದ್ದ ನಾರಾಯಣಸ್ವಾಮಿ, ನಕಲಿ ದಾಖಲೆ ಸೃಷ್ಟಿಸಿದ್ದ. ಅದನ್ನೇ ಅಸಲಿ ಎಂಬುದಾಗಿ ಬಿಂಬಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಿದ್ದ. ಸದರಿ ಜಮೀನಿನಲ್ಲಿ ವ್ಯವಸಾಯ ಮಾಡುವವರ ಮೇಲೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದ. ಇನ್ಸ್‌ಪೆಕ್ಟರ್ ಜೆ. ರಮೇಶ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.