ಬೆಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಸಾಂಸ್ಕೃತಿಕ ಉತ್ಸವ (ಬಿಜಿಯು) ಎನಿಸಿರುವ ಬೆಂಗಳೂರು ಗಣೇಶ ಉತ್ಸವ ಈ ಬಾರಿ ವರ್ಚುವಲ್ ರೂಪದಲ್ಲಿ ನಡೆಯಲಿದೆ. 58ನೇ ಆವೃತ್ತಿಯ ಈ ಉತ್ಸವವು ಆ.22ರಿಂದ ಸೆ.1ರವರೆಗೆ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ವರ್ಚುವಲ್ ಲೈವ್ನಲ್ಲಿ ಜರುಗಲಿದೆ.
ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿರುವ ಗಣೇಶ ಮಂಟಪದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ದೈನಂದಿನ ಪೂಜೆಯನ್ನೂ ವರ್ಚುವಲ್ ಆಗಿ ತೋರಿಸಲಾಗುತ್ತದೆ. ಎಲ್ಲ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಸಭಾಂಗಣದಿಂದ ನೇರಪ್ರಸಾರವಾಗಲಿದೆ.
ಖ್ಯಾತ ಗಾಯಕರಾದ ವಿಜಯ್ಪ್ರಕಾಶ್, ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ, ಪ್ರವೀಣ್ ಡಿ. ನೇತೃತ್ವದಲ್ಲಿ ರಾಜ್ಯದ ಗಾಯಕರನ್ನು ಒಳಗೊಂಡ 12 ತಾಸುಗಳ ನಿರಂತರ ಸುಗಮ ಸಂಗೀತ, ಪ್ರವೀಣ್ ಗೋಡ್ಖಿಂಡಿಯವರ ಸಂಗೀತ ಕಛೇರಿ ಕಾರ್ಯಕ್ರಮಗಳು ಸಂಗೀತ ಪ್ರಿಯರನ್ನು ಆಕರ್ಷಿಸಲಿದೆ.
‘58 ವರ್ಷಗಳಲ್ಲಿ ನಾವು ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಉತ್ಸವವನ್ನು ಉತ್ಸಾಹದಿಂದ ನಡೆಸಿಕೊಂಡು ಬಂದಿದ್ದೇವೆ. ಬೆಂಗಳೂರು ಜನರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿ ವರ್ಚುವಲ್ ರೂಪದಲ್ಲಿ ಉತ್ಸವವನ್ನು ನಡೆಸಲು ತೀರ್ಮಾನಿಸಿದ್ದೇವೆ. ಎಲ್ಲ ಸವಾಲುಗಳ ನಡುವೆಯೂ, ಎಲ್ಲ ಸಂಗೀತಗಾರರು ಮತ್ತು ಕಲಾವಿದರ ಪ್ರದರ್ಶನ ನೀಡಲಿದ್ದಾರೆ’ ಎಂದು ಬಿಜಿಯು ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್ ಹೇಳಿದ್ದಾರೆ.
ಎಲ್ಲ ಪ್ರದರ್ಶನಗಳು ಮತ್ತು ದೈನಂದಿನ ಪೂಜೆಗಳನ್ನುfacebook.com/BengaluruGaneshUtsavaಮತ್ತುyoutube.com/user/BengaluruGaneshUtsavನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.