ಬೆಳ್ತಂಗಡಿ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಲ್ಪನೆಯಂತೆ ಭಾರತೀಯ ವಿಚಾರಧಾರೆಯನ್ನು ಜನಮಾನಸದಲ್ಲಿ ಉದ್ದೀಪನಗೊಳಿಸುವ ಕೆಲಸವನ್ನು ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ನೆರವೇರಿಸುತ್ತಿದೆ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬಿಜೆಪಿ ಬೆಳ್ತಂಗಡಿ ಮಂಡಲದ ಎಸ್ಸಿ ಮೋರ್ಚಾದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಕಲ್ಪನೆಯಂತೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮತ ಬೇಟೆಗೆ ಬಿದ್ದು ಜಾತ್ಯತೀತ ಎಂಬ ರಾಜಕೀಯ ಮಾಡಿದೆಯೇ ಹೊರತು, ಕಟ್ಟಕಡೆಯ ಪರಿಶಿಷ್ಟ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರ ಎಲ್ಲ ಸ್ಥಳಗಳನ್ನು ಪುನರುಜ್ಜೀವನ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 64 ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಮೀಸಲಾತಿಗೆ ಸೇರಿದ 54 ಸದಸ್ಯರು ಬಿಜೆಪಿಯಲ್ಲಿ ಗೆಲುವು ಕಂಡಿದ್ದಾರೆ. ಅನೇಕ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
‘ಪರಿಶಿಷ್ಟರ ಕಾಲೊನಿ, ಸಮುದಾಯಕ್ಕೆ ವಿಶೇಷ ಅನುದಾನಗಳು ನನ್ನ ಅವಧಿಯಲ್ಲಿ ಬಂದಿವೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಕಾಲೊನಿಗಳ ಅಭಿವೃದ್ಧಿ ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಸಮುದಾಯದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಅನುದಾನ ತರಿಸಲಾಗುವುದು‘ ಎಂದು ಭರವಸೆ ನೀಡಿದರು.
‘ಈಗಾಗಲೇ ಬೆಳ್ತಂಗಡಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಂದಿದ್ದು, ಅದರ ನೀಲ ನಕಾಶೆ ತಯಾರಿಯಲ್ಲಿದೆ. ಸುಸಜ್ಜಿತವಾದ ಭವನದ ಜತೆಗೆ ಅಂಬೇಡ್ಕರ್ ಜೀವನ ಚರಿತ್ರೆಯ ಗ್ರಂಥಾಲಯ ಮಾಡಬೇಕೆಂದು ಚಿಂತಿಸಿದ್ದೇನೆ’ ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಎಸ್ಸಿ ಮೋರ್ಚಾದ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರಳ್ಯ, ಎಸ್ಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರ್, ಜಿಲ್ಲಾ ಘಟಕದ ಧ್ಯಕ್ಷ ವಿನಯನೇತ್ರ ದಡ್ಡಲಕಾಡು, ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ರಿಮಾರು, ಉಪಾಧ್ಯಕ್ಷರಾದ ರಾಘವ ಕಲ್ಮಂಜ, ಸದಾಶಿವ ಕರಂಬಾರು, ಸದಸ್ಯರಾದ ಸಿ.ಕೆ. ಚಂದ್ರಕಲಾ, ಕೇಶವ ಕನ್ಯಾಡಿ, ಪ್ರಭಾರಿ ಸುರೇಂದ್ರ ನರಿಕೊಂಬು, ತಾಲ್ಲೂಕು ಪ್ರಭಾರಿ ಕೊರಗಪ್ಪ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷ ಸೀತಾರಾಮ ಬಿ.ಎಸ್., ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಪ್ರಭಾಕರ ಆಚಾರ್ಯ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸವಿತಾ ಲಾಯಿಲ, ಎಪಿಎಂಸಿ ಸದಸ್ಯ ಈಶ್ವರ ಬೈರ, ಎಸ್ಸಿ ಮೋರ್ಚಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಪ್ಪ ಗರ್ಡಾಡಿ, ವಸಂತಿ ನೆರಿಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.