
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಬೆಳವನೂರು, ತುರ್ಚಘಟ್ಟ, ಚಂದ್ರನಹಳ್ಳಿ ಹಾಗೂ ಹೊಸಬಿಸಲೇರಿ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ನಿರ್ಮಿಸಿರುವ ₹ 3.45 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಶಾಮನೂರು ಶಿವಶಂಕರಪ್ಪ ಬುಧವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿ, ‘ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳನ್ನು ಶೀಘ್ರ ಲೋಕಾರ್ಪಣೆಗೊಳಿಸಲಾಗುವುದು’ ಎಂದು ಹೇಳಿದರು.
‘ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ. ನಿಂಗಪ್ಪ ಮಾತನಾಡಿ, ‘ಸ್ವತಃ ಶಾಸಕರೇ ಸಾರ್ವಜನಿಕರ ಅವಶ್ಯಕತೆಗಳನ್ನು ಮನಗಂಡು ಸಾರ್ವಜನಿಕರಿಗೆ ಸಮರ್ಪಿಸಿದ್ದಾರೆ’ ಎಂದರು.
ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ‘ಈ ಹಿಂದೆ ಶಾಮನೂರು ಶಿವಶಂಕರಪ್ಪನವರು ಸಚಿವರಾಗಿದ್ದ ವೇಳೆ ಈ ಭಾಗದಲ್ಲಿ ರೈತರ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದ್ದರು. ಜೊತೆಗೆ ಅಂದೇ ನಬಾರ್ಡ್ ಸಹಕಾರದೊಂದಿಗೆ ಗೋದಾಮುಗಳನ್ನು ನಿರ್ಮಿಸಲು ಶಿಫಾರಸು ಮಾಡಿದ್ದರು’ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಸಾಕಮ್ಮ ಗಂಗಾಧರನಾಯ್ಕ, ಎಪಿಎಂಸಿ ಉಪಾಧ್ಯಕ್ಷ ಬಿಸಲೇರಿ ಈರಣ್ಣ, ಸದಸ್ಯ ದೊಗ್ಗಳ್ಳಿ ಬಸವರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜಪ್ಪ, ಮೀನಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಬೆಳವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಮಾಲತೇಶ್, ಉಪಾಧ್ಯಕ್ಷೆ ಶೃತಿ ನಾಗರಾಜ್, ಮುಖಂಡರಾದ ತೆಂಗಿನಮರದ ಬಸವರಾಜಪ್ಪ, ಹನುಮಜ್ಜ, ಸತೀಶ್, ಕರಿಬಸಪ್ಪ, ರಿಯಾಜ್ ಅಹ್ಮದ್, ಅನ್ವರ್ ಇದ್ದರು.
ಲೋಕಾರ್ಪಣೆಗೊಂಡ ಕಾಮಗಾರಿಗಳು
ಹೊಸಬೆಳವನೂರು ಗ್ರಾಮದಲ್ಲಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ₹35 ಲಕ್ಷ ವೆಚ್ಚದ ಪಶು ಸಂಗೋಪನಾ ಆಸ್ಪತ್ರೆ, ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸೇವಾಲಾಲ್ ಸಮುದಾಯ ಭವನ ಹಾಗೂ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಎಪಿಎಂಸಿ ಗೋದಾಮು.
ತುರ್ಚಘಟ್ಟ ಗ್ರಾಮದಲ್ಲಿ ₹24 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯ ಮತ್ತು ವ್ಯಾಯಾಮಶಾಲೆ, ₹25 ಲಕ್ಷ ವೆಚ್ಚದ ಬಾಣದ ರಂಗನಾಥಸ್ವಾಮಿ, ₹31.50 ಲಕ್ಷ ವೆಚ್ಚದ ನಿರ್ಮಿಸಿರುವ ಹೈಸ್ಕೂಲ್ ಕೊಠಡಿ, ₹1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಎಪಿಎಂಸಿ ಗೋದಾಮು, ಚಂದ್ರನಹಳ್ಳಿಯಲ್ಲಿ ₹24 ಲಕ್ಷ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಹಾಗೂ ಹೊಸಬಿಸಲೇರಿ ಗ್ರಾಮದಲ್ಲಿ ₹21.20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.