ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರ ನೀಡಿ ₹ 2.10 ಲಕ್ಷ ವಂಚಿಸಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದ ತಿಮ್ಮೇಶ ಬಂಧಿತ ಆರೋಪಿ. ಈತ ಚಿಕ್ಕಮಗಳೂರು ಜಿಲ್ಲೆಯ ಕುಂದೂರು ಸಮೀಪದ ಸಾರಾಡೋಗು ಗ್ರಾಮದ ಮಂಜುನಾಥ ಎಂಬುವವರಿಗೆ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ವಂಚಿಸಿದ್ದ.
ಮಂಜುನಾಥ ಅವರು ಮಾರ್ಚ್ 9ರಂದು ಧರ್ಮಸ್ಥಳಕ್ಕೆ ಹೋಗಿದ್ದಾಗ ಅಲ್ಲಿ ರಾಜು ಎಂದು ಪರಿಚಯ ಮಾಡಿಕೊಂಡಿದ್ದ ಆರೋಪಿ ಅವರಿಗೆ, ‘ನಮ್ಮ ಪಕ್ಕದ ಮನೆಯ ಅಜ್ಜಿ ಮನೆಯ ಅಡಿಪಾಯ ತೆಗೆಯುವಾಗ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಅಜ್ಜಿ ಮಗಳ ಮದುವೆ ಮಾಡಬೇಕಾಗಿದ್ದು, ಹಣದ ಅಗತ್ಯ ಇದೆ’ ಎಂದು ನಂಬಿಸಿದ್ದ.
ಮಂಜುನಾಥ ಅವರಿಗೆ ಎರಡು ಬಂಗಾರದ ಬಿಲ್ಲೆಗಳನ್ನು ನೀಡಿ ಅವರಿಂದ ₹ 1,500 ಪಡೆದು ಅವರ ವಿಶ್ವಾಸ ಸಂಪಾದಿಸಿದ್ದ. ಬಳಿಕ ಅವರಿಗೆ ಕರೆ ಮಾಡಿಕುದುರೆಕೊಂಡ ಗ್ರಾಮಕ್ಕೆ ಬರಲು ಹೇಳಿ, ಅಲ್ಲಿ ಅರ್ಧ ಕೆ.ಜಿ.ಯ ನಕಲಿ ಬಂಗಾರದ ಬಿಲ್ಲೆಗಳಿದ್ದ ಗಂಟನ್ನು ನೀಡಿ ₹ 2, 10,000 ನಗದು ಹಾಗೂ 20 ಗ್ರಾಂ ಚಿನ್ನದ ಸರ ಪಡೆದಿದ್ದ.
ಮಂಜುನಾಥ ಅವರು ಶಿವಮೊಗ್ಗದಲ್ಲಿ ಬಂಗಾರದ ಬಿಲ್ಲೆಗಳನ್ನು ಪರೀಕ್ಷೆ ಮಾಡಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಈ ಸಂಬಂಧ ಅವರುನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಬೇಧಿಸಿರುವ ಪೊಲೀಸರು ಆರೋಪಿ ತಿಮ್ಮೇಶನನ್ನು ಸವಳಂಗ ಗ್ರಾಮದಲ್ಲಿ ಬಂಧಿಸಿದ್ದಾರೆ.
ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಡಾ. ಸಂತೋಷ್ ಕೆ.ಎಂ. ಹಾಗೂ ಸಿಪಿಐ ದೇವರಾಜ ಟಿ.ವಿ. ಅವರ ನೇತೃತ್ವದಲ್ಲಿ ಪಿಎಸ್ಐ ಪಿ.ಎಸ್. ರಮೇಶ, ಎಎಸ್ಐ ಚಂದ್ರು, ಸಿಬ್ಬಂದಿ ರವಿನಾಯಕ, ಮಂಜಪ್ಪ, ಮಂಜುನಾಥ, ಮೌನೇಶಾಚಾರಿ, ತಿಮ್ಮರಾಜು, ಚನ್ನೇಶ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.