
ದಾವಣಗೆರೆ: ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ–1976ಕ್ಕೆ ತಿದ್ದುಪಡಿ ಮಾಡಿ 2021–22ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ವಿರೋಧಪಕ್ಷದ ವಿರೋಧದ ನಡುವೆಯೇ ಇಲ್ಲಿನ ಪಾಲಿಕೆಯು ಬಹುಮತದಿಂದ ತೀರ್ಮಾನ ಕೈಗೊಂಡಿತು.
ಈ ತಿದ್ದುಪಡಿ ನಿಯಮಗಳ ಜಾರಿಗಾಗಿಯೇ ಬುಧವಾರ ಪಾಲಿಕೆ ಸಭಾಂಗಣದಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಜಿಎಸ್ಡಿಪಿಯ ಶೇ 0.25 ಹೆಚ್ಚುವರಿ ಸಾಲವನ್ನು ಕೇಂದ್ರ ಸರ್ಕಾರದಿಂದ ಪಡೆಯಲು ರಾಜ್ಯವು ಅರ್ಹವಾಗಬೇಕಿದ್ದರೆ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರ್ಗಸೂಚನೆಗಳಿಗೆ ಜೋಡಣೆ ಮಾಡಬೇಕು ಎಂದು ಅಧಿಕಾರಿಗಳು ವಿವರ ನೀಡಿದರು.
ಕೊರೊನಾ ಕಾಲದಲ್ಲಿ ಬಡವರಿಗೆ ಹೊರೆಯಾಗಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದರೆ, ಬಡವರಿಗೆ ಇದರಿಂದ ಲಾಭವಾಗಲಿದೆ ಎಂದು ಬಿಜೆಪಿ ವಿವರಿಸಿತು. ಕೊನೆಗೆ ಮತಕ್ಕೆ ಹಾಕಲು ನಿರ್ಧರಿಸಲಾಯಿತು. ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ಉಪಮೇಯರ್ ಶಿಲ್ಪಾ ಜಯಪ್ರಕಾಶ್ ಸಹಿತ 23 ಮಂದಿ ಪರವಾಗಿ ಕೈ ಎತ್ತಿದರು. ಅದರಲ್ಲಿ ಜೆಡಿಎಸ್ ಸದಸ್ಯೆ ಕೂಡ ಸೇರಿದ್ದರು. ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಸೇರಿ 16 ಮಂದಿ ವಿರೋಧವಾಗಿ ಕೈ ಎತ್ತಿದರು.
ಚರ್ಚೆ: ಹಿಂದೆ ಅಧಿಕಾರಿಗಳೇ ತೆರಳಿ ತೆರಿಗೆ ವಿಧಿಸುವ ಎಆರ್ವಿ (ಆನ್ಯುವಲ್ ರೆವೆನ್ಯು ವ್ಯಾಲ್ಯು) ಪದ್ಧತಿ ಇತ್ತು. 2001ರಿಂದ ಎಸ್ಎಎಸ್ (ಸೆಲ್ಫ್ ಅಸಸ್ಮೆಂಟ್ ಸ್ಕೀಂ) ಜಾರಿಗೆ ಬಂತು. ಕಳೆದ ವರ್ಷ ಮೇಯರ್ ಅಧಿಕಾರ ಹಿಡಿಯವ ಹಿಂದಿನ ದಿನ ಆಡಳಿತಾಧಿಕಾರಿ ಆಗಿದ್ದ ಜಿಲ್ಲಾಧಿಕಾರಿ ಶೇ 18ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿ ಆದೇಶ ಮಾಡಿದ್ದರು. ಕೊರೊನಾ ಕಾಲದಲ್ಲಿ ಇದು ಹೊರೆಯಾಗಿತ್ತು. ಈಗ ಮತ್ತೆ ಹೆಚ್ಚಳ ಮಾಡಿದರೆ ಜನರಿಗೆ ಬಹಳ ತೊಂದರೆಯಾಗಲಿದೆ ಎಂದು ಎ.ನಾಗರಾಜ್ ತಿಳಿಸಿದರು.
ಪ್ರತಿ ಮನೆ, ಬೀದಿ, ರಸ್ತೆಗಳಿಗೆ ತೆರಿಗೆ ಬದಲಾಗಲಿದೆ. ತೆರಿಗೆಯಲ್ಲಿ ಅಜಗಜಾಂತರ ವ್ಯತ್ಯಾಸವಾಗಲಿದೆ. ಗೊಂದಲ ಇರುವುದರಿಂದ ಈ ಬಗ್ಗೆ ಸಾಧಕ–ಬಾಧಕಗಳ ಚರ್ಚೆ ನಡೆಸಿದ ಬಳಿಕ ಅನುಷ್ಠಾನಗೊಳಿಸುವುದು ಉತ್ತಮ. ಈಗ ತೀರ್ಮಾನ ಕೈಗೊಳ್ಳುವುದು ಬೇಡ ಎಂದು ಪಟ್ಟು ಹಿಡಿದರು. ಚಮನ್ಸಾಬ್, ಮಂಜುನಾಥ್, ಲತೀಫ್ ಅವರೂ ಆಗ್ರಹಿಸಿದರು.
ಹಿಂದಿನ ತೆರಿಗೆ ಪದ್ಧತಿಯಲ್ಲಿ ಎಲ್ಲರಿಗೂ ಒಂದೇ ರೀತಿ ತೆರಿಗೆ ಬೀಳುತ್ತಿತ್ತು. ಈಗ ಯಾವ ಪ್ರದೇಶದಲ್ಲಿ ಮಾರುಕಟ್ಟೆ ಮೌಲ್ಯ ಹೆಚ್ಚಾಗುತ್ತದೆಯೋ ಅಲ್ಲಿ ಮಾತ್ರ ತೆರಿಗೆ ಹೆಚ್ಚಾಗುತ್ತದೆ. ಕೊಳೆಗೇರಿಗಳು, ಬಡವರು ಇರುವ ಪ್ರದೇಶಗಳಲ್ಲಿ ಆಸ್ತಿಯ ಮಾರುಕಟ್ಟೆ ಮೌಲ್ಯ ಹೆಚ್ಚಳವಾಗುವುದಿಲ್ಲ. ಆಗ ತೆರಿಗೆಯೂ ಹೆಚ್ಚಳವಾಗುವುದಿಲ್ಲ. 2006ರಿಂದ ಇಲ್ಲಿವರೆಗೆ ಶೇ 86ರಷ್ಟು ತೆರಿಗೆ ಹೆಚ್ಚಳವಾಗಿದೆ. ಅದು ಎಲ್ಲರೂ ಕಟ್ಟಬೇಕಿತ್ತು. ಈ ಹೊಸ ನಿಯಮದಿಂದ ಬಡವರಿಗೆ ಲಾಭವಾಗಲಿದೆ ಎಂದು ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಸಮರ್ಥಿಸಿಕೊಂಡರು. ಶಿವಪ್ರಕಾಶ್, ಉಮಾ ಪ್ರಕಾಶ್ ಮತ್ತಿತರರು ಧ್ವನಿಗೂಡಿಸಿದರು.
‘ತೆರಿಗೆ ಪರಿಷ್ಕರಣೆ ಮಾಡುತ್ತಿಲ್ಲ. ತೆರಿಗೆ ಲೆಕ್ಕಾಚಾರದ ಪದ್ಧತಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಬಡವರ ಬಗ್ಗೆ ಎಲ್ಲರ ಕಾಳಜಿಯನ್ನು ಗೌರವಿಸುತ್ತೇನೆ. ಸರ್ಕಾರ ಜಾರಿಗೆ ತಂದಿರುವ ಈ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಬೇಕು. ಅಳವಡಿಸಿಕೊಳ್ಳದೇ ಉಂಟಾಗುವ ನಷ್ಟಕ್ಕೆ ಆಯ ನಗರ ಸ್ಥಳೀಯಾಡಳಿತಗಳನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗುತ್ತದೆ’ ಮೇಯರ್ ಎಸ್ಟಿ ವೀರೇಶ್ ತಿಳಿಸಿದರು.
‘ನಮಗೆ ಬರುವ ಅನುದಾನಗಳು ಈ ಪದ್ಧತಿಯ ಅನುಷ್ಠಾನವನ್ನು ಅವಲಂಬಿಸಿದೆ’ ಎಂದು ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಹೇಳಿದರು. ಅನುದಾನ ಬರುವುದಿಲ್ಲ ಎಂದು ಹೆದರಿಸಿ, ಗನ್ ಇಟ್ಟು ಅನುಮೋದನೆ ಪಡೆಯುತ್ತಿದ್ದೀರಿ ಎಂದು ನಾಗರಾಜ್ ಟೀಕಿಸಿದರು.
ತೆರಿಗೆ ಪಾವತಿ ಮಾಡದೇ ಇರುವವರಿಗೆ ತಿಂಗಳಿಗೆ ಶೇ 2 ವರ್ಷಕ್ಕೆ ಶೇ 24 ದಂಡ ವಿಧಿಸುವ ಪದ್ಧತಿಯನ್ನು ಕೈಬಿಡಬೇಕು. ಇಷ್ಟೊಂದು ದಂಡ ವಿಧಿಸುವ ಪದ್ಧತಿ ಎಲ್ಲೂ ಇಲ್ಲ ಎಂದು ಎ.ನಾಗರಾಜ್, ಕೆ. ಚಮನ್ಸಾಬ್ ಮತ್ತಿತರರು ಒತ್ತಾಯಿಸಿದರು.
ಆರ್ಥಿಕ ಶಿಸ್ತು ತರಲು ದಂಡ ವಿಧಿಸಲಾಗುತ್ತದೆ. ಇದು ಸರ್ಕಾರದ ನಿಯಮ. ಸರಿಯಾಗಿ ತೆರಿಗೆ ಪಾವತಿಸಿದರೆ ದಂಡ ವಿಧಿಸುವ ಪ್ರಮೇಯ ಬರುವುದಿಲ್ಲ ಎಂದು ಪ್ರಸನ್ನ ಕುಮಾರ್ ತಿಳಿಸಿದರು.
ತಿದ್ದುಪಡಿಯ ನಂತರ ಆಗುವ ಬದಲಾವಣೆಗಳು
* 2005–06ರ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಮಾರ್ಗಸೂಚಿಬೆಲೆಯಲ್ಲಿ ತೆರಿಗೆ ವಿಧಿಸಲಾಗುತ್ತದೆ.
* 2005–06ರ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಶೇ 50ರಷ್ಟು ಪರಿಗಣಿಸಬೇಕಿತ್ತು. ಚಾಲ್ತಿ ಮಾರುಕಟ್ಟೆ ಬೆಲೆಯ ಶೇ 25 ಮಾತ್ರ ಪರಿಗಣನೆ
* ಆಸ್ತಿ ಮೂಲ ಬೆಲೆ ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 15 ಹೆಚ್ಚಳವಾಗುತ್ತಿತ್ತು. ಈಗ ಶೇ 3ರಿಂದ ಶೇ 5 ಮಾತ್ರ ಹೆಚ್ಚಳ.
* ವಾಸದ ಕಟ್ಟಡಗಳ ಮಾರುಕಟ್ಟೆ ಮೂಲ ಬೆಲೆಯ ಕನಿಷ್ಠ ಶೇ 0.3ರಿಂದ ಶೇ 1ರ ವರೆಗೆ ತೆರಿಗೆ ಇತ್ತು. ಇನ್ನು ಶೇ 0.2ರಿಂದ ಶೇ 1.5 ಇರಲಿದೆ.
* ಖಾಲಿ ನಿವೇಶನಗಳಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಮೂರು ವಿವಿಧ ತೆರಿಗೆಗಳಿದ್ದವು. ಇನ್ನು ಶೇ 0.2ರಿಂದ ಶೇ 0.5ರ ಒಳಗೆ ಒಂದೇ ರೀತಿ ತೆರಿಗೆ ಇರಲಿದೆ.
* ಕಟ್ಟಡಕ್ಕೆ ಹೊಂದಿಕೊಂಡಿರುವ ಖಾಲಿ ನಿವೇಶನಕ್ಕೆ ತೆರಿಗೆ ವಿನಾಯಿತಿ ಇತ್ತು. ಇನ್ನು ಮುಂದೆ 1000 ಚಡರ ಅಡಿಗಳಿಗಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.