ಮೈಸೂರು: ‘ಬೆಂಗಳೂರು– ಮೈಸೂರು ದಶಪಥ ಕಾಮಗಾರಿಯ ಗುಣಮಟ್ಟವನ್ನು ಕಾಯ್ದು
ಕೊಳ್ಳಲು ಶ್ರಮಿಸಬೇಕಾದ ಪ್ರತಿಪಕ್ಷದ ನಾಯಕರು, ಪ್ರಚಾರದಲ್ಲಿ ಮುಳುಗಿದ್ದರಿಂದ ಜನರು ಸಂಕಷ್ಟ ಎದುರಿಸುವಂತಾಯಿತು’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಅವರು ಹೇಳಿದ್ದಾರೆ.
‘ಬೆಂಗಳೂರು–ಮೈಸೂರು–ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ಗೊಂಡ ಮೇಲೆ ಯಾವುದೇ ಪಕ್ಷದ ಸರ್ಕಾರ ಬಂದರೂ ಪೂರ್ಣಗೊಳಿಸಬೇಕು. ಆದರೆ, ವ್ಯವಸ್ಥಿತ ಹಾಗೂ ವೈಜ್ಞಾನಿಕ ಕಾಮಗಾರಿ ನಡೆಸ
ಬೇಕಾದವರು ನಿರ್ಲಕ್ಷ್ಯ ವಹಿಸಿದರು’ ಎಂದು
ಪ್ರಕಟಣೆಯಲ್ಲಿ ದೂರಿದ್ದಾರೆ.
‘ಉತ್ತಮ ರಸ್ತೆ ನಿರ್ಮಾಣದತ್ತ ವ್ಯವಸ್ಥಿತ ಪ್ರಯತ್ನವನ್ನು ಕಾಂಗ್ರೆಸ್ ಮಾಡಿದೆ. 1,882 ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಯುಪಿಎ ಸರ್ಕಾರ ಅನುಮೋದಿಸಿತ್ತು. ಅದರಿಂದಲೇ ದಶಪಥ ಕಾಮಗಾರಿ ಅನುಷ್ಠಾನಗೊಂಡಿದೆ’ ಎಂದು ತಿಳಿಸಿದ್ದಾರೆ.
‘ಕಾಂಗ್ರೆಸ್ ಅವಧಿಯಲ್ಲಿ ಪೂರ್ಣಗೊಂಡ ರಸ್ತೆಗಳು ಮುಂದಿನ 15 – 20 ವರ್ಷಗಳವರೆಗೆ ಸುಸ್ಥಿತಿಯಲ್ಲಿರುತ್ತವೆ. ಅವುಗಳ ಗುಣಮಟ್ಟವನ್ನು ವಿಶ್ವಬ್ಯಾಂಕ್ ಶ್ಲಾಘಿಸಿದೆ. ಕೆಲಸ ಯಾರದ್ದೋ, ಮಾತು– ಪ್ರಚಾರ ಮತ್ಯಾರದ್ದೋ ಎನ್ನುವ
ಪರಿಸ್ಥಿತಿ ನಿಲ್ಲಬೇಕು. ಕೆಲಸವನ್ನು ಗೌರವಿಸುವ ಆರೋಗ್ಯಕರ ಮನಸ್ಥಿತಿ ಮತ್ತು ರಾಜಕೀಯ ಮುತ್ಸದ್ದಿತನ ಬೆಳೆಯಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.