ಮಡಿಕೇರಿ: ಪಿಯು ಪರೀಕ್ಷೆ ಮೊದಲ ದಿನವಾದ ಗುರುವಾರ ಕೊಡಗು ಜಿಲ್ಲೆಯ ಎಲ್ಲ 19 ಕೇಂದ್ರಗಳಲ್ಲೂ ಪರೀಕ್ಷೆ ನಿರ್ವಿಘ್ನವಾಗಿ ನಡೆಯಿತು. ಕನ್ನಡ ವಿಷಯಕ್ಕೆ ಒಟ್ಟು 4,506 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಇವರ ಪೈಕಿ 4,352 ಮಂದಿ ಹಾಜರಾದರು. 154 ವಿದ್ಯಾರ್ಥಿಗಳು ಗೈರಾದರು. ಮಾರ್ಚ್ 11ರಂದು ಗಣಿತ ವಿಷಯದ ಪರೀಕ್ಷೆ ನಡೆಯಲಿದೆ.
ಪಿಯು ಪರೀಕ್ಷೆಗೆ ಒಟ್ಟು 5,560 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿ ದ್ದಾರೆ. ಒಟ್ಟು 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಎಲ್ಲ ತಾಲ್ಲೂಕಿ ನಲ್ಲಿಯೂ ತಲಾ ಒಂದೊಂದು ಜಾಗೃತ ದಳ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಗಳನ್ನು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು 7 ಮಾರ್ಗಾಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ.
ಸುಂಟಿಕೊಪ್ಪದಲ್ಲಿ ಮೊದಲ ಬಾರಿ ಪರೀಕ್ಷೆ
ಸುಂಟಿಕೊಪ್ಪ: ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲಗಳಿಲ್ಲದೇ ಸಾಗಿತು.
ಪರೀಕ್ಷೆ ಆರಂಭಕ್ಕೂ ಮುನ್ನ ಕಾಲೇಜು ವತಿಯಿಂದ ಮಕ್ಕಳಿಗೆ ಶುಭಾಶಯ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಪರೀಕ್ಷಾ ಮುಖ್ಯ ಅಧೀಕ್ಷಕರಾದ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್, ‘ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರ ಆರಂಭವಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ಪರೀಕ್ಷೆಯನ್ನು ಎದುರಿಸಿ. ವಿದ್ಯಾಭ್ಯಾಸದ ಹಂತದಲ್ಲಿ ಪಿಯುಸಿ ಒಂದು ಮೈಲುಗಲ್ಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪರೀಕ್ಷೆಯ ಪಾವಿತ್ರ್ಯವನ್ನು, ಶಿಸ್ತು ಬದ್ಧತೆ ಕಾಪಾಡಿ’ ಎಂದು ಸಲಹೆ ನೀಡಿದರು.
ಪರೀಕ್ಷಾ ಉಸ್ತುವಾರಿ ಸುನೀತಾ ಪರೀಕ್ಷೆ ಬಗ್ಗೆ ಮಾರ್ಗದರ್ಶನ ನೀಡಿದರು. ನಂತರ ಸಿಹಿ ಹಂಚಿ ವಿದ್ಯಾರ್ಥಿಗಳನ್ನು ಕೊಠಡಿಗೆ ಕಳುಹಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಯಂ.ಕರುಂಬಯ್ಯ, ಸಂತ ಮೇರಿ ಆಂಗ್ಲ ಪಿಯು ಕಾಲೇಜಿನ ಪ್ರಾಚಾರ್ಯ ಸೆಲ್ವರಾಜ್, ಗರಗಂದೂರು ಮೊರಾರ್ಜಿ ದೇಸಾಯಿ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ನವಿನ, ಉಪನ್ಯಾಸಕರಾದ ಕೆ.ಸಿ.ಕವಿತಾ, ಸುನೀತಾ, ಸರಳಾ, ಕವಿತಾ ಭಕ್ತಾ, ಪದ್ಮಾವತಿ, ಮಂಜುಳಾ, ಸುಚಿತ್ರಾ, ಕೋಕಿಲ್, ಅಭಿಷೇಕ್, ಅನುಷ್ಕಾ, ಈಶ, ಕನಕ, ಸಹ ಮುಖ್ಯ ಅಧೀಕ್ಷಕರಾದ ಭವಾನಿ ಇದ್ದರು.
ಒಟ್ಟು 311 ವಿದ್ಯಾರ್ಥಿಗಳ ಪೈಕಿ 255 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.