ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದ 8 ವರ್ಷದ ಬಾಲಕಿ ಚರಿತಾ ಆರ್.ರಾಯಲ್ ತನ್ನ ಹುಟ್ಟು ಹಬ್ಬಕ್ಕಾಗಿ ಡಬ್ಬಿ ಗಡಿಗೆಯಲ್ಲಿ ಕೂಡಿಟ್ಟಿದ್ದ ಸುಮಾರು ₹ 11 ಸಾವಿರವನ್ನು ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ.
ಮುಳಬಾಗಿಲಿನಲ್ಲಿ ವಾಸವಿರುವ ರಮೇಶ್ಕುಮಾರ್ ಮತ್ತು ಲಾವಣ್ಯ ದಂಪತಿಯ ಮಗಳಾದ ಚರಿತಾ ಖಾಸಗಿ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ. ಪೋಷಕರು ಹಾಗೂ ಸಂಬಂಧಿಕರು ಕೊಡುವ ಹಣವನ್ನು ಡಬ್ಬಿ ಗಡಿಗೆಯಲ್ಲಿ ಕೂಡಿಡುವ ಚರಿತಾ ತನ್ನ ಹುಟ್ಟು ಹಬ್ಬದ ದಿನದಂದು ಆ ಹಣವನ್ನು ಸಮಾಜ ಸೇವಾ ಕಾರ್ಯಕ್ಕೆ ಬಳಕೆ ಮಾಡುತ್ತಾ ಬಂದಿದ್ದಾಳೆ.
ಚರಿತಾ ಕಳೆದೊಂದು ವರ್ಷದಿಂದ ಕೂಡಿಟ್ಟಿದ್ದ ಹಣವು ದೇಶದೆಲ್ಲೆಡೆ ಕೊರೊನಾ ಸೋಂಕಿನಿಂದ ತೊಂದರೆಗೆ ಸಿಲುಕಿರುವವರ ಕಷ್ಟ ಪರಿಹಾರಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿ, ಪೋಷಕರೊಂದಿಗೆ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಹಣ ನೀಡಿದಳು. ಬಾಲಕಿಯ ಸೇವಾ ಮನೋಭಾವಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.