ADVERTISEMENT

ಬಿಗ್‌ಬಾಸ್‌: ರವಿ ಬೆಳಗೆರೆ ಬೆಳಿಗ್ಗೆ ಔಟ್‌, ಸಂಜೆ ಇನ್‌!

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಲ್ಲ; ಇನ್ನು ಅತಿಥಿಯಷ್ಟೇ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 4:15 IST
Last Updated 15 ಅಕ್ಟೋಬರ್ 2019, 4:15 IST
   

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 7ರಲ್ಲಿ ಸ್ಪರ್ಧಿಯಾಗಿದ್ದ ಪತ್ರಕರ್ತ ರವಿ ಬೆಳೆಗೆರೆ ಅನಾರೋಗ್ಯದಿಂದಾಗಿ ಮೊದಲ ದಿನವೇ ‘ಬಿಗ್ ಬಾಸ್’ ಮನೆಯಿಂದಹೊರಬಂದಿದ್ದು, ಪರಿಣಾಮ ಅವರು ಸ್ಪರ್ಧಿಯಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ.

ಚಿಕಿತ್ಸೆಯ ನಂತರ ರವಿ ಬೆಳಗೆರೆ ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ಬಿಗ್‌ ಬಾಸ್‌ ಮನೆಗೆ ವಾಪಸಾಗಿದ್ದಾರೆ. ಆದರೆ, ಬಿಗ್‌ ಬಾಸ್‌ ಮನೆಯಲ್ಲಿ ನಡೆಯುವ ಟಾಸ್ಕ್‌ಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಶನಿವಾರದವರೆಗೆ ಮಾತ್ರ ಅವರು ಅತಿಥಿಯಾಗಿ ಮುಂದುವರಿಯಬಹುದು ಎಂದು ‘ಬಿಗ್ ಬಾಸ್’ ರಿಯಾಲಿಟಿ ಶೋ ಆಯೋಜಕ ಮೂಲಗಳು‘ಪ್ರಜಾವಾಣಿ’ಗೆ ತಿಳಿಸಿವೆ.

‘ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಂದೆಯವರು ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದು ನಿಜ. ಈಗ ಅವರು ಆರೋಗ್ಯವಾಗಿದ್ದು, ಪುನಾಹೋಗಿದ್ದಾರೆ. ಮತ್ತೆ ಯಾವಾಗ ಹೊರ ಬರುತ್ತಾರೋ ಗೊತ್ತಿಲ್ಲ’ ಎಂದು ರವಿ ಬೆಳೆಗೆರೆ ಪುತ್ರಿ ಭಾವನಾ ಬೆಳೆಗೆರೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ರಕ್ತದೊತ್ತಡದಲ್ಲಿ ಸಮಸ್ಯೆ ಉಂಟಾಗಿರವಿ ಬೆಳೆಗೆರೆ ಅವರು ಕುಸಿದು ಬಿದ್ದರು. ವೈದ್ಯಕೀಯ ತಂಡ ತುರ್ತು ಚಿಕಿತ್ಸೆ ನೀಡಿ, ಎರಡು ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾವಹಿಸಿತ್ತು. ಆದರೆ, ಅವರು ತಮ್ಮ ಕುಟುಂಬ ವೈದ್ಯರ ಬಳಿ ಚಿಕಿತ್ಸೆಗಾಗಿ ರಾಜರಾಜೇಶ್ವರಿ ನಗರಕ್ಕೆ ಹೋಗಿದ್ದರು. ಮುಂದಿನದು ಬಿಗ್‌ಬಾಸ್‌ಗೆ ನಿರ್ಧಾರಕ್ಕೆ ಬಿಟ್ಟದ್ದು’ ಎಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್‌ ಗುಂಡ್ಕಲ್‌ ಸ್ಪಷ್ಟಪಡಿಸಿದ್ದಾರೆ.

ಬೆಳೆಗೆರೆ ನಿಜವಾಗಿಯೂ ಹೋಗಿದ್ದೆಲ್ಲಿಗೆ?
ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣಕ್ಕೆ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದರವಿ ಬೆಳೆಗೆರೆ, ಹತ್ತಿರದ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು ಎನ್ನುವ ಮಾತು ಕೇಳಿಬಂದಿವೆ. ರಾಜರಾಜೇಶ್ವರಿ ನಗರದಲ್ಲಿ ಕುಟುಂಬ ವೈದ್ಯರ ಬಳಿ ಆರೋಗ್ಯ ಪರೀಕ್ಷಿಸಿಕೊಂಡ ನಂತರ ಅವರು, ಮೃತರ ಅಂತಿಮ ದರ್ಶನಕ್ಕೆ ಹೋಗಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಬಿಗ್‌ಬಾಸ್‌ ಮನೆಗೆ ವಾಪಸಾದರು ಎನ್ನುತ್ತವೆ ಕಲರ್ಸ್‌ ಕನ್ನಡ ವಾಹಿನಿಯ ಕೆಲವು ಮೂಲಗಳು.

ಸ್ಪರ್ಧಿಯೊಬ್ಬ ಬಿಗ್‌ಬಾಸ್‌ ಮನೆಯನ್ನು ಹೊಕ್ಕರೆ ನಿಯಮದ ಪ್ರಕಾರ ಸ್ಪರ್ಧೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಒಂದು ವೇಳೆ ‘ಬಿಗ್‌ಬಾಸ್‌’ ಕುಟುಂಬದ ಸದಸ್ಯರು ಒಪ್ಪಿದರೆ ಒಂದೆರಡು ವಾರಗಳ ಕಾಲ ರವಿ ಬೆಳೆಗೆರೆಯವರನ್ನು ಸ್ಪರ್ಧಿಯಾಗಿ ಉಳಿಸಿಕೊಳ್ಳಬಹುದು ಅಥವಾ ‘ಬಿಗ್‌ಬಾಸ್‌’ ಅವರೇ ನಿಯಮ ಬದಲಾಯಿಸಿ‌ದರೆ ಮಾತ್ರ ಬೆಳೆಗೆರೆ ಉಳಿಯಬಹುದಾಗಿದೆ. ರವಿ ಬೆಳೆಗೆರೆ ನಿಜವಾಗಿಯೂ ಯಾವ ಕಾರಣಕ್ಕೆ ಹೊರ ಹೋಗಿದ್ದರೆನ್ನುವುದನ್ನು ಮತ್ತು ಅವರನ್ನು ಉಳಿಸಿಕೊಳ್ಳಬೇಕಾ? ಎನ್ನುವುದನ್ನು ‘ಬಿಗ್‌ಬಾಸ್‌’ ಈ ವಾರಾಂತ್ಯದ ವಿಶೇಷ ಸಂಚಿಕೆಯಲ್ಲೇ ಸ್ಪಷ್ಟಪಡಿಸಲಿದ್ದಾರೆ ಎನ್ನುತ್ತವೆ ವಾಹಿನಿಯ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.