ತಿರುವನಂತಪುರಂ: ಮಿದುಳು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂ ನಟಿ ಶರಣ್ಯಾ ಶಶಿ ನಿಧನರಾಗಿದ್ದಾರೆ. ಮೇ ತಿಂಗಳಲ್ಲಿ ಕೋವಿಡ್ 19 ಸೋಂಕು 35 ವರ್ಷದ ನಟಿಯನ್ನು ಬಾಧಿಸಿತ್ತು.
ನಟಿ ಶರಣ್ಯಾ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ ಸೋಂಕು ತಗುಲಿದ ಬಳಿಕ ಹೆಚ್ಚು ಬಳಲಿದ್ದರು. ಹಲವು ವರ್ಷಗಳಿಂದ ಮಿದುಳು ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಬಾರಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು ಎಂದು 'ಪಿಟಿಐ' ವರದಿ ಮಾಡಿದೆ.
ಚಿಕಿತ್ಸೆಗೆ ಹಣಕಾಸಿನ ತೊಂದರೆಯನ್ನು ಶಶಿ ಅನುಭವಿಸಿದ್ದರು. ಈ ಸಂದರ್ಭ ಆಕೆಯ ಸಹನಟಿಯರು ಸಹಾಯ ಮಾಡಿದ್ದು, ಶಸ್ತ್ರಚಿಕಿತ್ಸೆ ನಿಧಿ ಸಂಗ್ರಹವನ್ನು ಮಾಡಿದ್ದರು ಎಂದು ಪಿಟಿಐ ಹೇಳಿದೆ.
ಕಣ್ಣೂರು ಜಿಲ್ಲೆಯ ಪಳಯಂಗಡಿ ಎಂಬ ಸಣ್ಣ ಪೇಟೆಯಲ್ಲಿ ಶರಣ್ಯಾ ಶಶಿ ಜನಿಸಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ನಟಿ, ಕರುಥಮುತ್ತು ಮತ್ತು ಹರಿಚಂದನಂ ಎಂಬ ಟಿವಿ ಶೋಗಳ ಮೂಲಕ ಹೆಸರುವಾಸಿಯಾಗಿದ್ದರು. ಮಲಯಾಳಂನ ಹೆಸರಾಂತ ನಟರಾದ ಮೋಹನ್ ಲಾಲ್, ಪೃಥ್ವಿರಾಜ್ ಸಿನಿಮಾಗಳಲ್ಲಿ ಶರಣ್ಯಾ ಕಾಣಿಸಿಕೊಂಡಿದ್ದಾರೆ.
ಟಿವಿ ಸೀರಿಸ್ 'ಚಂದಮಳ'ದ ಶೂಟಿಂಗ್ ಸಂದರ್ಭ ಶಶಿ ಮಿದುಳು ಕ್ಯಾನ್ಸರ್ಗೆ ಸಂಬಂಧಿಸಿ ಪುನಃ ಚಿಕಿತ್ಸೆಗೆ ಒಳಪಟ್ಟಿದ್ದರು. ಏಪ್ರಿಲ್ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.