ADVERTISEMENT

ಮಾನನಷ್ಟ ಮೊಕದ್ದಮೆ: ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೇಲೆ ವಿಶ್ವಾಸವಿಲ್ಲ –ಕಂಗನಾ

ಪಿಟಿಐ
Published 20 ಸೆಪ್ಟೆಂಬರ್ 2021, 19:29 IST
Last Updated 20 ಸೆಪ್ಟೆಂಬರ್ 2021, 19:29 IST
ನಟಿ ಕಂಗನಾ
ನಟಿ ಕಂಗನಾ   

ಮುಂಬೈ: ಚಿತ್ರ ಸಾಹಿತಿ ಜಾವೇದ್‌ ಅಖ್ತರ್ ಅವರು ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಕಂಗನಾ ರನೌತ್‌ ಇಲ್ಲಿನ ಕೋರ್ಟ್‌ಗೆ ಸೋಮವಾರ ಹಾಜರಾದರು.

‘ನನಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೇಲೆ ವಿಶ್ವಾಸವಿಲ್ಲ. ಜಾಮೀನು ಪಡೆಯಬಹುದಾದ ಪ್ರಕರಣದಲ್ಲೂ ತನ್ನ ಎದುರು ಹಾಜರಾಗದಿದ್ದರೆ ವಾರಂಟ್‌ ನೀಡಲಾಗುವುದು ಎಂದು ‘ಬೆದರಿಕೆ ಹಾಕಿದೆ’ ಎಂದು ನಟಿ ಪ್ರತಿಕ್ರಿಯಿಸಿದರು.

ಕಂಗನಾ ಕೂಡಾ ಚಿತ್ರಸಾಹಿತಿ ಜಾವೇದ್ ಅಖ್ತರ್‌ ಅವರ ವಿರುದ್ಧ ಪ್ರತಿದೂರು ಸಲ್ಲಿಸಿದ್ದು, ‘ಸುಲಿಗೆ ಮತ್ತು ಕ್ರಿಮಿನಲ್‌ ಉದ್ದೇಶ’ ಆರೋಪವನ್ನು ಹೊರಿಸಿದ್ದಾರೆ. ದೂರನ್ನು ಬೇರೊಂದು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರ ಪರ ವಕೀಲರು ಹೇಳಿದರು.

ADVERTISEMENT

ದೂರಿನಲ್ಲಿ ನಟಿ ಕಂಗನಾ ಅವರು, ಸಾರ್ವಜನಿಕವಾಗಿ ತಮ್ಮ ನಡುವೆ ವಿವಾದ ಕಾಣಿಸಿಕೊಂಡ ನಂತರ ಅಖ್ತರ್ ಅವರು ತಮ್ಮನ್ನು, ತನ್ನ ಸಹೋದರಿಯನ್ನು ತನ್ನ ಮನೆಗೆ ಬರಲು ತಿಳಿಸಿದ್ದು, ಇದರ ಹಿಂದೆ ಕೆಟ್ಟ ಉದ್ದೇಶವಿತ್ತು. ನಂತರ ಬೆದರಿಕೆ ಒಡ್ಡಿದ್ದರು. ಸಹನಟನಿಗೆ ಲಿಖಿತವಾಗಿ ಕ್ಷಮೆ ಕೋರಲು ಒತ್ತಾಯಿಸಿದ್ದರು ಎಂದು ತಿಳಿಸಿದ್ದಾರೆ.

‘ಅತ್ಯುತ್ತಮ ಹಿನ್ನೆಲೆ, ಕುಟುಂಬದಿಂದ ಬಂದಿರುವ ಸಹನಟನ ಜೊತೆಗೆ ಸಾರ್ವಜನಿಕವಾಗಿ ವಿವಾದ ಹುಟ್ಟಿಕೊಳ್ಳುವುದರಿಂದ ತಮ್ಮ ಬದಕು ಹಾಳು ಮಾಡಿಕೊಳ್ಳುತ್ತಿದ್ದೀರಿ. ನಟ ಹೃತಿಕ್‌ ರೋಷನ್‌ಗೆ ಕ್ಷಮೆ ಕೋರದಿದ್ದರೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.