ADVERTISEMENT

ಲಾಕ್‌ಡೌನ್‌ ನಿರ್ಬಂಧ ಇನ್ನಷ್ಟು ಸಡಿಲ; ಮಾಲ್‌, ದೇವಸ್ಥಾನಗಳಿಗೆ ಅನುಮತಿ?

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 20:56 IST
Last Updated 2 ಜುಲೈ 2021, 20:56 IST
ಬೆಂಗಳೂರು ಲಾಕ್‌ಡೌನ್‌ ಸಂದರ್ಭದ ಚಿತ್ರ
ಬೆಂಗಳೂರು ಲಾಕ್‌ಡೌನ್‌ ಸಂದರ್ಭದ ಚಿತ್ರ   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ನಿಯಮಗಳು ಇನ್ನಷ್ಟು ಸಡಿಲಿಕೆ ಆಗಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ (ಜು.3) ಸಂಜೆ ನಡೆಯಲಿರುವ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮಾಲ್‌, ದೇವಸ್ಥಾನಗಳನ್ನು ತೆರೆಯುವುದಕ್ಕೆ ಅವಕಾಶ ನೀಡುವ ಸಂಭವ ಇದ್ದು, ಸಿನಿಮಾ ಮಂದಿರ ತೆರೆಯಲು ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.

ಶಾಲಾ–ಕಾಲೇಜು ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧ ಸಚಿವರ ಮಧ್ಯೆ ಒಮ್ಮತ ಇಲ್ಲದಿರುವ ಕಾರಣ ಮುಖ್ಯಮಂತ್ರಿಯವರೇ ಸೂಕ್ತ ನಿರ್ದೇಶನಗಳನ್ನು ನೀಡಬಹುದು ಎಂದು ಹೇಳಲಾಗಿದೆ.

ADVERTISEMENT

ಬೆಂಗಳೂರು ಸೇರಿದಂತೆ ರಾಜ್ಯ ಹಲವು ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕಿನ ದೃಢ ಪ್ರಮಾಣ ಮತ್ತು ಸಾವಿನ ಸಂಖ್ಯೆ ಇಳಿಮುಖವಾಗಿರುವುದರಿಂದ ನಿರ್ಬಂಧಗಳನ್ನು ಸಡಿಲಗೊಳಿಸಲು ತಜ್ಞರು ಸಲಹೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಸಂಜೆ 5 ರಿಂದ ಈಗಿರುವ ರಾತ್ರಿ ಕರ್ಫ್ಯೂವನ್ನು ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ಮಾರ್ಪಾಡು ಮಾಡುವ ಸಾಧ್ಯತೆ ಇದೆ.ರಾತ್ರಿ 8 ರವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ವಾರಾಂತ್ಯ ಕರ್ಫ್ಯೂ ರದ್ದು ಪಡಿಸುವ ಬಗ್ಗೆಯೂ ಚರ್ಚೆ ನಡೆಯಬಹುದು ಎಂದೂ ಮೂಲಗಳುತಿಳಿಸಿವೆ.

ದೇವಸ್ಥಾನ ತೆರೆಯಲು ಕ್ರಮ: ಕೆಲವು ಸುರಕ್ಷತಾ ಕ್ರಮಗಳನ್ನು ವಿಧಿಸಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಬೇಕಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

ಸೋಂಕು ಕಡಿಮೆ ಇರುವ ಕಡೆಗಳಲ್ಲಿ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಬಹುದು. ಆದರೆ, ಉತ್ಸವ, ಜಾತ್ರೆ, ಅನ್ನದಾನ, ಪ್ರಸಾದ ವಿತರಣೆಗಳ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.