ADVERTISEMENT

ಚುರುಮುರಿ: ನಾನು ಮತ್ತು ಪೆಗಾಸಸ್

ಆನಂದ ಉಳಯ
Published 30 ಜುಲೈ 2021, 19:45 IST
Last Updated 30 ಜುಲೈ 2021, 19:45 IST
ಚುರುಮುರಿ
ಚುರುಮುರಿ   

ಪೆಗಾಸಸ್ ಕದ್ದಾಲಿಕೆ ಸುದ್ದಿ ಓದಿ ಖಿನ್ನನಾಗಿದ್ದೆ. ಹೆಂಡತಿ ಬಂದಳು. ‘ಏನು ಮತ್ತೆ ವರಿ ಮಾಡಿಕೊಂಡಿದ್ದೀರ’ ಎಂದು ಕೇಳಿದಳು.

‘ಇಲ್ಲೂ ನನ್ನ ಹೆಸರು ಇರುತ್ತೋ ಇಲ್ಲವೋ’ ಎಂದೆ ನಿರಾಶೆಯ ಧ್ವನಿಯಲ್ಲಿ. ಅವಳಿಗೆ ಗೊತ್ತು, ಪ್ರತಿಸಲ ಪತ್ರಿಕೆಗಳಲ್ಲಿ ಲಿಸ್ಟ್ ಬಂದಾಗ ನನ್ನ ಹೆಸರು ಇರುತ್ತೇನೋ ಎಂದು ಹುಡುಕುತ್ತಿರುತ್ತೇನೆ. ನವೆಂಬರ್ 1 ಬರುವ ಕೆಲವು ದಿನಗಳ ಮೊದಲು ನನಗೆ ಭಾರೀ ಟೆನ್ಷನ್. ಫೋನ್ ಬಾರಿಸಿದಾಗಲೆಲ್ಲ ಬಹುಶಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಸಮ್ಮತಿ ಕೇಳಲು ಬಂದಿರುವ ಕರೆ ಎಂದು ಭಾವಿಸುತ್ತಿದ್ದೆ. ಹೆಸರುಗಳು ಪ್ರಕಟವಾದ ಮೇಲೆ, ನನಗೆ ಅಚ್ಚರಿ ಮೂಡಿಸಲು ನನ್ನ ಕೇಳದೇ ನನ್ನ ಹೆಸರು ಪ್ರಕಟಿಸಿರಬಹುದು ಎಂದು ಬೆಂಬಿಡದ ಆಶಾಭಾವನೆಯಿಂದ ಪಟ್ಟಿಯನ್ನು ಪರಿಶೀಲಿಸು
ತ್ತಿದ್ದೆ, ಅಚ್ಚರಿ ಆಗುತ್ತಲೇ ಇರುತ್ತಿರಲಿಲ್ಲ.

‘ಅಯ್ಯೋ ನವೆಂಬರ್ ಇನ್ನೂ ದೂರ ಇದೆ. ಹೊಸ ಸರ್ಕಾರ ಬಂದಿದೆ. ಹೊಸ ಮಾನದಂಡ ಬರಬಹುದು ತಾಳಿ’ ಎಂದಳು. ‘ಅಂದಹಾಗೆ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸಲು ಮೋದೀಜಿ ಕರೆ ನೀಡಿದ್ದಾರೆ. ನಿಮ್ಮ ಫ್ರೆಂಡ್ಸ್‌ಗೆ ಹೇಳಿ ನಿಮ್ಮ ಹೆಸರು ಸೂಚಿಸಲು’ ಎಂದು ನನಗೆ ಸೂಚಿಸಿದಳು.

ADVERTISEMENT

‘ಮೋದೀಜಿಗೆ ಯುವಕರು ಬೇಕಂತೆ. ನಾನು ನಾಟ್ ಎಲಿಜಿಬಲ್. ಆದರೆ ನನಗೆ ಈಗ ಪೆಗಾಸಸ್ ಚಿಂತೆ’ ಎಂದೆ. ಅವಳಿಗೆ ತಲೆಬುಡ ಅರ್ಥವಾಗಲಿಲ್ಲ. ಹೇಗೆ ಅನೇಕರ ಫೋನ್‍ಗಳನ್ನು ಕದ್ದಾಲಿಸಲು ಪೆಗಾಸಸ್ ತಂತ್ರಾಂಶ ಬಳಸಲಾಗುತ್ತಿದೆ ಎಂದು ವಿವರಿಸಿದೆ.

‘ಅದಕ್ಯಾಕೆ ನಿಮಗೆ ಚಿಂತೆ?’ ಎಂದಳು ಆಶ್ಚರ್ಯದಿಂದ. ‘ಅರೆ! ನನ್ನ ಫೋನನ್ನು ಸಹ ಕದ್ದಾಲಿಸುತ್ತಿದ್ದಾರೆ ಎಂದು ಜನಗಳಿಗೆ ಗೊತ್ತಾದರೆ ನಾನು ಫೇಮಸ್ ಆಗೊಲ್ಲವಾ? ಆದರೆ ಲಿಸ್ಟ್ ಹೊರಬಿದ್ದೇ ಇಲ್ಲ’ ಎಂದೆ.

‘ಅಲ್ರೀ ನಿಮ್ಮ ಫೋನನ್ನು ಕದ್ದಾಲಿಸಲು ಹೇಗೆ ಸಾಧ್ಯ?’ ಎಂದು ಕೇಳಿದಳು ತುಂಟತನದಿಂದ. ‘ವೈ ನಾಟ್?’ ಅಂದೆ. ‘ನಿಮ್ಮ ಫೋನಲ್ಲಿ ಇಂಟರ್‌ನೆಟ್ ಕನೆಕ್ಷನ್ ಇಲ್ಲವಲ್ರೀ. ಅದು ಬೇಸಿಕ್‌ ಫೋನ್’.

‘ಹೌದಲ್ವೆ? ಛೆ! ಮೊದಲು ಫೋನ್ ಬದಲಾಯಿಸಬೇಕು’ ಎಂದು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.