ADVERTISEMENT

ಒಳನೋಟ: ಲಾಕ್‌ಡೌನ್ ಕಾರಣ ಕಾರ್ಮಿಕರ ಕೊರತೆ; ಸಿಮೆಂಟ್ ಉತ್ಪಾದನೆ ಶೇ 50ರಷ್ಟು ಕಡಿತ

ಬಹುತೇಕ ನಿರ್ಮಾಣ ಚಟುವಟಿಕೆ ಸ್ಥಗಿತ

ಮನೋಜ ಕುಮಾರ್ ಗುದ್ದಿ
Published 29 ಮೇ 2021, 22:00 IST
Last Updated 29 ಮೇ 2021, 22:00 IST
   

ಕಲಬುರ್ಗಿ: ರಾಜ್ಯದ ಸಿಮೆಂಟ್ ಕಾಶಿ ಎಂದು ಕರೆಸಿಕೊಳ್ಳುವ ಕಲಬುರ್ಗಿ ಜಿಲ್ಲೆಯಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಇಲ್ಲಿನ ಕಾರ್ಖಾನೆಗಳ ಬಹುದೊಡ್ಡ ಮಾರುಕಟ್ಟೆ ಬೆಂಗಳೂರು, ಮುಂಬೈ ಹಾಗೂ ಪುಣೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ತಿಂಗಳುಗಳಿಂದ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಕೊರೊನಾ ಭೀತಿಯಿಂದಾಗಿ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರಿಂದ ನಿರೀಕ್ಷಿಸಿದಷ್ಟು ಉತ್ಪಾದನೆ ಆಗುತ್ತಿಲ್ಲ.

ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿಯಲ್ಲಿ ಎಸಿಸಿ ಸಿಮೆಂಟ್, ಚಿತ್ತಾಪುರ ಬಳಿ ಓರಿಯೆಂಟ್ ಸಿಮೆಂಟ್, ಸೇಡಂ ತಾಲ್ಲೂಕಿನಲ್ಲಿ ವಾಸವದತ್ತಾ ಸಿಮೆಂಟ್, ರಾಜಶ್ರೀ ಸಿಮೆಂಟ್, ಶ್ರೀ ಸಿಮೆಂಟ್, ಚಿಂಚೋಳಿಯಲ್ಲಿ ಚೆಟ್ಟಿನಾಡ್ ಸಿಮೆಂಟ್, ಕಲಬುರ್ಗಿ ಸಿಮೆಂಟ್ ಕಾರ್ಖಾನೆಗಳಿವೆ. ಪ್ರತಿ ಕಾರ್ಖಾನೆಯೂ ಶೇ 30ರಿಂದ 50ರಷ್ಟು ಉತ್ಪಾದನೆ ಕಡಿತಗೊಳಿಸಿದೆ. ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಜೆ.ಕೆ. ಸಿಮೆಂಟ್‌ ಸಹ ಉತ್ಪಾದನೆಯನ್ನು ಶೇ 60ರಿಂದ 70ರಷ್ಟು ಕಡಿತಗೊಳಿಸಿದೆ.

ಕೋವಿಡ್‌ ಎರಡನೇ ಅಲೆಯಿಂದಾಗಿ ನಿರ್ಮಾಣ ವಲಯವೂ ತತ್ತರಿಸಿದೆ. ಭಾರಿ ಪ್ರಮಾಣದ ವಸತಿ ಸಂಕೀರ್ಣ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರದ ವತಿಯಿಂದ ಅನುಷ್ಠಾನಗೊಳ್ಳಬೇಕಿದ್ದ ವಸತಿ ಯೋಜನೆಗಳು, ಸರ್ಕಾರಿ ಕಟ್ಟಡಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎನ್ನುತ್ತಾರೆ ಕಲಬುರ್ಗಿಯ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಒಬ್ಬರು.

ADVERTISEMENT

ಈ ಕುರಿತು ಪ‍್ರತಿಕ್ರಿಯೆ ನೀಡಿದ ಕ್ರೆಡಾಯ್ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ನಜೀಬ್, ‘ಕಟ್ಟಡ ಕೆಲಸಗಳು ಬಹುತೇಕ ಸ್ಥಗಿತಗೊಂಡಿದ್ದರಿಂದ ಸಿಮೆಂಟ್ ಕಾರ್ಖಾನೆಗಳು ಉತ್ಪಾದನೆ ಕಡಿತಗೊಳಿಸಿವೆ. ಜಿಲ್ಲೆಯ ಮೂರು ಪ್ರಮುಖ ಕಾರ್ಖಾನೆಗಳು ಎರಡು ಘಟಕಗಳನ್ನು ಬಂದ್ ಮಾಡಿ ಒಂದು ಘಟಕದಲ್ಲಷ್ಟೇ ಸಿಮೆಂಟ್ ಉತ್ಪಾದಿಸುತ್ತಿವೆ’ ಎಂದರು.

***

ಕಾರ್ಮಿಕರು ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ತಂದರೆ ಮಾತ್ರ ಕಾರ್ಖಾನೆಯಲ್ಲಿ ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಪ್ರಸ್ತುತ ಶೇ 30ರಷ್ಟು ಸಿಮೆಂಟ್ ಉತ್ಪಾದನೆ ಕಡಿಮೆಯಾಗಿದೆ.
-ಶಿವಾನಂದ ಪಾಟೀಲ, ಲೈಸನಿಂಗ್‌ ಅಧಿಕಾರಿ, ಓರಿಯೆಂಟ್ ಸಿಮೆಂಟ್, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.